ನಾನೀಗ ಮೊದಲಿನಂತಿಲ್ಲ
ನೀ ಸಿಗಲಿಲ್ಲ ಅಂತ
ಖಂಡಿತ ಬೇಜಾರಿಲ್ಲ
ಈಗ ನಾನು ಮೊದಲಿನಂತಿಲ್ಲ
ನಿನ್ನನ್ನೇ ನೆನೆಸಿ ಕೊರಗುತ್ತಿಲ್ಲ
ನೀ ಕಾಡಿದಾಗಲೆಲ್ಲ
ಮನಸ್ಸು ನಿನ್ನ ಸಂಗ ಬೇಡಿದಾಗಲೆಲ್ಲ
ಸುಮ್ಮನೆ ಮೌನಕ್ಕೆ ಶರಣಾಗುತ್ತೇನೆ
ಇಲ್ಲಸಲ್ಲದ ಉಪಮೆಗಳ ಕೆತ್ತಿ
ನಿನ್ನ ಮೇಲೆ ಪದ್ಯ ಕಟ್ಟುವುದ ಬಿಟ್ಟಿದ್ದೇನೆ
ಹಾಗೆ ಬರೆದ ಕವಿತೆಗಳ
ಗಂಟುಕಟ್ಟಿ ಅಟ್ಟಕ್ಕೆಸೆದು
ನಿಟ್ಟುಸಿರು ಬಿಟ್ಟಿದ್ದೇನೆ
ನೆನಪುಗಳು ಒತ್ತೊತ್ತಿ ಬಂದಾಗ
ದುಃಖಗಳ ಭಾರ ಅತಿಯಾಯಿತು ಅನಿಸಿದಾಗ
ಎಂದಾದರೊಮ್ಮೆ ಅತ್ತು ಹಗುರಾಗುತ್ತೇನೆ
ಅಷ್ಟಕ್ಕೂ ಸಮಾಧಾನವಾಗದಿದ್ದರೆ
ಹೊದ್ದು ಮಲಗುತ್ತೇನೆ
ಕನಸಿನಲ್ಲಾದರೇ ನೀನು ಖಂಡಿತ ಸಿಗುತ್ತಿ
ನನ್ನೊಂದಿಗೇ ಮಾತನಾಡುತ್ತಿ, ಲಲ್ಲೆ ಗರಿಯುತ್ತಿ,
ಅಷ್ಟರಲ್ಲೇ ನಿದ್ದೆಯ ಮಂಪರು ಕಣ್ಣಿಗತ್ತಿ
ನಾನು ಕೊಸರತೊಡಗಿದಾಗ
ಹಣೆ, ಕಣ್ಣು, ಕೆನ್ನೆಗೆಲ್ಲ ಹೂಮುತ್ತನಿಡುತ್ತ
ನೀ ನನ್ನೊಳಗೆ ಕರಗಿಹೋಗುತ್ತಿ
ಮನಸ್ಸೀಗ ಅದೆಷ್ಟೋ ನಿರಾಳ
5 comments October 30, 2008
ನಾನು ಮಾದೇವಣ್ಣ ಮೀನಿಗೆ ಗಾಳಹಾಕಿ ಕುಂತದ್ದು
ಹೀಗೊಂದು ದಿನ ಶಿವನಸಮುದ್ರಕ್ಕೆ ಹೋಗಿದ್ದೆ. ಮಳೆಗಾಲದ ಸಮಯ. ಎಂದಿಗಿಂತ ಜೋರಾಗಿ ಹರಿಯೋ ಕಾವೇರಿ. ನದಿಯ ಮೊರೆತದ ಸದ್ದು ದೂರಕ್ಕೂ ಕೇಳಿಸುತ್ತಾ ಇತ್ತು. ಸಖತ್ ನೀರು. ಭರಚುಕ್ಕಿಯನ್ನು ಕಂಡವನೇ ಅದರ ತಳಕ್ಕೆ ಹೊರಟೆ. ಉದ್ದಕ್ಕೂ ಕಲ್ಲುಚಪ್ಪಡಿಯ ಕೊರಕಲು ಹಾದಿ. ಆದರೆ ನನ್ನಂಥವರು ಎಲ್ಲಾದರೂ ನೇರವಾಗಿ ಹೋಗೋದುಂಟಾ! ಅಡ್ಡದಾರಿ ಹಿಡಿದೆ. ಎಡಕ್ಕೆ ತಿರುಗಿದ್ದೇ ಕೆಳಕ್ಕಿಳಿಯತೊಡಗಿದೆ. ಮಳೆಯಿಂದ ತೋಯ್ದ ನೆಲ. ಸ್ವಲ್ಪ ಎಚ್ಚರ ತಪ್ಪಿದರೂ ಸಾಕು ಸುಯ್… ಅಂತ ಜಾರಿಸಿಕೊಂಡು ನೇರ ಜಲಪಾತಕ್ಕೇ ಹೊತ್ತೊಯ್ಯೊ ಅಷ್ಟು ಜಾರುತ್ತಿತ್ತು. ದುರಾದೃಷ್ಟಕ್ಕೆ ಒಬ್ಬನೇ ಬೇರೆ? ಹಿಂಗೆ ಬಿದ್ದರೂ, ಕೊಚ್ಚಿಕೊಂಡು ನೀರೊಳಗೆ ಹೋದರೂ ಎತ್ತುವವರಿಲ್ಲ. ಈ ಹುಡುಗ ಬಂದಿದ್ದ ಅನ್ನುವುದಕ್ಕೆ ಗುರುತೇ ಸಿಗದ ಹಾಗಾದರೆ ಕಷ್ಟ ಅನ್ನುತ್ತ ಎಚ್ಚರದಿಂದ ಹೆಜ್ಜೆ ಇಡುತ್ತಿದ್ದೆ. ಹೀಗೆ ಮುಂದೆ ಹೋಗಿ ನೋಡಿದರೆ ಅಲ್ಲೂ ಒಂದು ಮಿನಿ ಜಲಧಾರೆ. ಆಶ್ಚರ್ಯ ಅನ್ನುವಂತೆ ಅಲ್ಲಿ ಒಬ್ಬ ಮೀನುಗಳಿಗೆ ಗಾಳ ಹಾಕಿ ಕುಂತಿದ್ದಾನೆ. ಅರರೆ.. ಅಂತ ಹತ್ತಿರ ಓದವನೇ ಒಂದಿಷ್ಟು ಹೊತ್ತು ಅವನ ಪಕ್ಕದಲ್ಲೇ ನಿಂತೆ. ಹೆಂಗೆ ಗಾಳ ಹಾಕ್ತಾನೆ ಅಂತ ನೋಡಲಿಕ್ಕೆ! ಆಮೇಲೆ ಅವನನ್ನ ಮಾತನಾಡಿಸಿದೆ. ಸರ್ ಸ್ವಲ್ಪ ಬಿಜಿ ಇದ್ರು. ಮಾತಾಡೋದು ಲೇಟ್ ಆಯ್ತು. ಆಮೇಲೆ ಹಂಗೂ ಹಿಂಗೂ ಪರಿಚಯ ಮಾಡಿಕೊಂಡು ಗಾಳ ಹಾಕುವ ಪಾಠ ಹೇಳಿಸಿಕೊಳ್ಳಲು ಮುಂದಾದೆ.
ಈ ಮೀನು ಹಿಡಿಯುವ ಸಾಹಸ ನಂಗೆ ಹೊಸದೇನಲ್ಲ. ಚಿಕ್ಕವನಿದ್ದಾಗ ಮನೆಯ ಮುಂದೆಯ ಬಚ್ಚಲು ಬಗೆದು, ಎರೆಹುಳು ತೆಗೆದು , ಗಾಳ ಹಿಡಿದು ಹೊಳೆಗೆ ಹೋಗುತ್ತಿದ್ದೆ. ಅಲ್ಲಿ ಗಾಳಕ್ಕೆ ಎರೆಹುಳು ಸಿಕ್ಕಿಸಿ ಹೊಳೆಗೆ ತೇಲಿಬಿಟ್ಟು ಗಂಟೆಗಟ್ಟಲೆ ಫಿಳಿ ಫಿಳಿ ಕಣ್ಣು ಬಿಟ್ಟು ಕುಂತರೂ, ಮುಂಡೇವೂ ಒಂದ್ ಮೀನು ಬೀಳ್ತಿರ್ಲಿಲ್ಲ. ಕಿಲಾಡಿ ಮೀನುಗಳು ಮೀನು ಹಿಡಿಯಲು ಬರದ ನನ್ನ ದಡ್ಡತನವನ್ನೇ ಬಂಡವಾಳ ಮಾಡಿಕೊಂಡು, ಇದ್ದ ಬದ್ದ ಹುಳವನ್ನೆಲ್ಲ ಗಾಳಕ್ಕೆ ಸಿಕ್ಕದ ಹಾಗೆ ಮೇದು ಹೋಗುತ್ತಿದ್ದವು. ಕವರಿನಲ್ಲಿದ್ದ ಹುಳುವೆಲ್ಲ ಖಾಲಿಯಾದ ಮೇಲೆ ನಾನು ಪೆಚ್ಚುಮುಖ ಹಾಕಿಕೊಂಡು ಮನೆಗೆ ಹೋಗೋದು ಖಾಯಂ ದಿನಚರಿ.
ಇಂತಿಪ್ಪ ನನಗೆ ಮೀನು ಹಿಡಿಯುವುದೆಂದರೆ ಇರುವ ಎರಡು ಕಣ್ಣುಗಳು ನಾಲ್ಕಾಗಿ ಅರಳಿ ಬಿಡುತ್ತವೆ. ಇಷ್ಟೆಲ್ಲ ನೆನಪಿಸಿಕೊಳ್ಳೋ ವಾಗಲೇ ಆತನ ಗಾಳಕ್ಕೆ ಮೀನೊಂದು ಬಿತ್ತು. ಅಷ್ಟೇನೂ ದಪ್ಪವಲ್ಲದ ಮೀನು. ಯಾವ ಜಾತಿಯದ್ದೋ. ಅವನು ಅದನ್ನ ಬುಟ್ಟಿಗಿರಿಸುವ ಮುನ್ನ ನಾನು ಒಂದ್ನಿಮಿಷ ಅಂತಂದು ಕ್ಯಾಮರಾವನ್ನ ತಿರುಗಿಸಿ ತಿರುಗಿಸಿ ಎರಡೆರಡು ಸಲ ಕ್ಲಿಕ್ಕಿಸಿದೆ. ಒಂದು ಚೆನ್ನಾಗಿ ಬರದಿದ್ರೆ ಇನ್ನೊಂದಾದ್ರೂ ಬರಲಿ ಅಂತ.
ಆಮೇಲೆ ಮೀನು ಬುಟ್ಟಿ ಸೇರಿತು. ಗಾಳ ನೀರಿಗಿಳಿಯಿತು. ನಮ್ಮ ಮಾತು ಶುರುವಾಯಿತು. ಈತನ ಹೆಸರು ಮಾದೇವ ಅಂತ. ಈ ಮಾದೇವಣ್ಣ ಅಲ್ಲೇ ಹತ್ತಿರದಲ್ಲಿರೋ ಸತ್ತೆಗಾಲ ಎಂಬ ಊರಿನವರು. ಆಗಾಗ್ಗೆ ಇಲ್ಲಿಗೆ ಮೀನು ಹಿಡಿಲಿಕ್ಕೆ ಬರ್ತಾರಂತೆ. ಅದು ಸರಿ ಆದ್ರೆ ಜಲಪಾತದಡಿಗೇ ಬಂದಿದ್ದೀರಲ್ಲಾ ಅಂದ್ರೆ ಮೀನುಗಳು ಎಲ್ಲೆಲ್ಲಿಂದಲೋ ಈಜುತ್ತಾ ಬಂದು ಇಲ್ಲಿ ಮೇಲಿಂದ ಬೀಳ್ತಾವಲ್ಲ ಅದಕ್ಕೆ ಅಂದ್ರು. ಯಾವ ಜಾತಿಯ ಮೀನು ಹಿಡಿತೀರಿ ಅಂದ್ರೆ ಗಾಳಕ್ಕೆ ಸಿಗುವ ಎಲ್ಲ ಜಾತಿಯದೂ ಅಂತ ‘ಜಾತಿ ವಿಜಾತಿಯೆನಬೇಡ….’ ಅನ್ನುವವರ ಹಾಗೇ ಸಣ್ಣದಾಗಿ ನಕ್ಕರು.
ಅಷ್ಟರಲ್ಲೇ ನನ್ನ ಕಣ್ಣು ಪಕ್ಕದಲ್ಲೇ ಹರಿಯುತ್ತಿದ್ದ ರೈಲು ಹುಳುವಿನ ಮೇಲೆ ಬಿತ್ತು. ಹೇಗಾದರೂ ಮಾಡಿ ಇದರದ್ದೊಂದು ಚಂದದ ಚಿತ್ರ ತೆಗೀಬೇಕಲ್ಲ ಅನ್ನೋ ತವಕ. ಅದೋ ನನ್ನನ್ನು ಕಂಡದ್ದೇ ಬೆಚ್ಚಿ ಬೀಳುತ್ತಾ ತನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ ಸುರುಳಿಯಾಗಿ ಸುತ್ತಿಕೊಂಡು, ಮತ್ತೆ ತೆರೆದುಕೊಳ್ಳುತ್ತ ಹರಿಯುತ್ತಿತ್ತು. ಚಿಮ್ಮುವ ಹನಿಗಳಿಂದ ಕ್ಯಾಮರಾ ಲೆನ್ಸ್ ರಕ್ಷಿಸಿಕೊಂಡು ಹೇಗೋ ಬಂದರಲ್ಲಿ ಒಂದೆರಡು ಫೋಟೊ ಕ್ಲಿಕ್ಕಿಸಿದೆ. ಅದರ ಪಾಡಿಗೆ ಅದನ್ನು ಬಿಟ್ಟೆ.
ಇಷ್ಟೊತ್ತಾದರೂ ಇನ್ನೊಂದು ಮೀನು ಗಾಳಕ್ಕೆ ಬೀಳಲಿಲ್ಲ. ಮತ್ತೆ ಮಾತು ಮುಂದುವರಿಯಿತು. ಹೀಗೆ ಒಂದೊಂದು ಬಾರಿ ಮೀನು ಹಿಡಿದಾಗಲೂ ಅವರಿಗೆ ಇನ್ನೂರರಿಂದ ಮುನ್ನೂರು ರುಪಾಯಿ ವ್ಯಾಪಾರ ಆಗುತ್ತಂತೆ. ಸತ್ತೆಗಾಲದಲ್ಲೇ ಮೀನು ಮಾರುತ್ತೀನಿ ಅಂತಂದ್ರು. ಅಷ್ಟರಲ್ಲೇ ಎಲ್ಲಿತ್ತೋ ನತದೃಷ್ಟ ಮೀನು. ಗಾಳಕ್ಕೆ ಬಂದು ಬಿತ್ತು. ಈ ಸಲದ ಮೀನು ಮೊದಲಿನದ್ದಕ್ಕಿಂತ ಸ್ವಲ್ಪ ದಪ್ಪದಿತ್ತು. ಆದ್ರೆ ಅಷ್ಟೇನೂ ದೊಡ್ಡ ಗಾತ್ರದ್ದಾಗಿರಲಿಲ್ಲ. ನನಗೆ ಕೊಂಚ ನಿರಾಸೆಯೇ ಆಯ್ತು. ಇರಲಿ ದೊಡ್ಡ ಮೀನುಗಳನ್ನು ನಾನೇ ಹಿಡಿಯುತ್ತೇನೆ ಅಂದುಕೊಂಡೆ. ಅದನ್ನೂ ಬಿಡದೇ ಕ್ಲಿಕ್ಕಿಸಿದೆ. ಎಂದಿನಂತೆ ಮೀನು ಬುಟ್ಟಿಗೆ ಗಾಳ ನೀರಿಗೆ.
ಅಷ್ಟರಲ್ಲೇ, ನಾನಿಲ್ಲಿಗೆ ಬಂದದ್ದರ ಉದ್ದೇಶ ನೆನಪಾಯಿತು. ಎದ್ದವನೇ ಅಲ್ಲಿಂದ ಹೊರಡಲು ಅನುವಾದೆ. ಹೋಗುವ ಮುನ್ನ ಮಾದೇವಣ್ಣನದ್ದೂ ಒಂದು ಫೋಟೊ ಕ್ಲಿಕ್ಕಿಸಿದೆ. ಸ್ಮೈಲ್ ಪ್ಲೀಸ್ ಅಂದದ್ದೆ, ಅವರೂ ಥೇಟ್ ಹಿರೋ ಥರಾನೇ ಫೋಸ್ ಕೊಟ್ಟರು. ಅವರಿಗೊಂದು ಬೈ ಹೇಳಿ ಅಲ್ಲಿಂದ ಮೇಲಕ್ಕೆ ಹೊರಟೆ.
1 comment October 22, 2008
ಜೋಕೆ ಜಾಣೆ ಇದು ಜಾಹಿರಾ…ಥೂ!
(ಸದ್ಯಕ್ಕೆ ಏನೂ ಬರೆಯಲಾಗದ ನನ್ನ ಸೋಮಾರಿತನಕ್ಕೆ ಕ್ಷಮೆ ಇರಲಿ. ಈ ಸಲ ಸಣ್ಣದೊಂದು ಬದಲಾವಣೆ. ನನ್ನ ಬದಲಾಗಿ ಗೆಳೆಯ ಚೈತನ್ಯ ಹೆಗಡೆ ಮುಗಿಲಕಂಪಿಗಾಗಿ ಬರೆದಿದ್ದಾನೆ. ಓದಿ ನಿಮಗೇನನ್ನಿಸಿತು ನಾಲ್ಕು ಸಾಲು ಬರೆಯುವುದು ಮರೆಯದಿರಿ.)
ಚೆಲುವೆ ಜಾಹಿರಾ
ಥೂ ಎಂದು ಉಗಿದರೆ ಅದೇ ಒಂದು ಜಾಹಿರಾತು..
ಹಾಗಂತ ವೈಯೆನ್ಕೆ ಬರೆದಿದ್ದರು. ತಮಾಷೆಯ ಮಾತೀಗ ತೀರ ವಾಸ್ತವ. ಎಲ್ಲ ಜಾಹಿರಾತುಗಳಲ್ಲೂ ಇದೀಗ ಉಗಿಯಲು, ಉಲಿಯಲು, ಉನ್ಮಾದಿಸಲು ಮಾನಿನಿಯರೇ ಬೇಕು. ಶೇವಿಂಗ್ ಕ್ರೀಮ್ ಜಾಹಿರಾತಿಗೂ ಬೇಕು ಸುಹಾಸಿನಿಯರ ಹಾಜರಿ. ಆದರೆ, ತಕರಾರಿನ ವಿಷಯ ಅದಲ್ಲ.
ದೃಶ್ಯ ಮಾಧ್ಯಮದಲ್ಲಿ ಮಹಿಳೆಯರ ಚಿತ್ರಣ ಮೊದಲಿಂದಲೂ ಚರ್ಚೆಯ ವಸ್ತುವೇ. ಸೌಂದರ್ಯದ ಹೆಸರಲ್ಲಿ ಮಹಿಳೆಯನ್ನು ಅತಿಕಡಿಮೆ ಬಟ್ಟೆಯಲ್ಲಿ ತೋರಿಸುವುದು ಅಬಾತ ಬೆಳವಣಿಗೆ. ಅದು ಜಾಹಿರಾತು ಕ್ಷೇತ್ರದಲ್ಲೂ ಮುಂದುವರಿದಿದೆ. ಅದಕ್ಕೂ ಮಿಕ್ಕಿ ಗಮನಿಸಬೇಕಾದ ಕೆಲ ಅಂಶಗಳಿಲ್ಲಿವೆ.
*ಸುವಾಸನಾ ಸಿಂಪಡಿಕೆ ಉತ್ಪನ್ನವೊಂದರ ಜಾಹಿರಾತು ಹೀಗಿದೆ. ಮೇಕಪ್ ವ್ಯಾನ್ನಿಂದ ಹೊರಬರುತ್ತಿರುವ ಹುಡುಗಿ. ಅದನ್ನೇ ಕಾಯುತ್ತಿದ್ದ ಹುಡುಗ ತನ್ನ ಮೈಗೆಲ್ಲಾ ‘ಆ’ ಸೆಂಟ್ ಪೂಸಿಕೊಳ್ಳುತ್ತಾನೆ. ಆ ಹುಡುಗಿ ಸೆಂಟ್ನ ಘಮಕ್ಕೆ ಮೋಹಿತಳಾಗಿ ಜಗದ ಪರಿವೆಯೇ ಇಲ್ಲದಂತೆ ಅವನ ತೆಕ್ಕೆಗೆ ಬೀಳುತ್ತಾಳೆ.
*ಅಂಥದ್ದೇ ಇನ್ನೊಂದು ಜಾಹಿರಾತಿನಲ್ಲಿ ಮೈಗೆಲ್ಲಾ ಕೆಸರು ಪೂಸಿಕೊಂಡ ಯುವಕನನ್ನು ಮುತ್ತಿಕೊಳ್ಳುವ ಹುಡುಗಿಯರು ಎಗ್ಗಿಲ್ಲದೇ ಆತನ ಮುಖ-ಮೈಗಳ ಕೆಸರು ಕಚ್ಚುತ್ತಾರೆ. ಯಾಕೆಂದರೆ ಆತ ಸೆಂಟ್ ಪುಸಿಕೊಂಡಿರುತ್ತಾನೆ. ಅದು ಹುಡುಗಿಯರು ಹತ್ತಿಕ್ಕಿಕ್ಕೊಳ್ಳಲಾಗದ ಅತ್ತರು
*ಇಂಥದೇ ಸುಗಂಧ ಉತ್ಪನ್ನದ ಕುರಿತ ಇನ್ನೊಂದು ಜಾಹಿರಾತಂತೂ ಇನ್ನೂ ಒಂದು ಹೆಜ್ಜೆ ಮುಂದಿರಿಸಿದೆ. ಸೆಂಟ್ ಪೂಸಿಕೊಂಡ ಹುಡುಗನೊಬ್ಬನಿಗೆ ಅಕಸ್ಮಾತ್ ಢಿಕ್ಕಿ ಹೊಡೆದ ಮಹಿಳೆಯೋರ್ವಳು ಅಲ್ಲೇ ಮೋಹಿತಳಾಗಿ ಅವನೊಂದಿಗೆ ರೊಮಾನ್ಸ್ ಮಾಡಿದಂತೆ ಕನಸಿಗೆ ಜಾರುತ್ತಾಳೆ.
*ಬ್ಯೂಟಿ ಕ್ರೀಂಗಳ ಕುರಿತ ಜಾಹಿರಾತುಗಳಂತೂ ಕಪ್ಪು ಬಣ್ಣದವರು ಭೂಮಿಯಲ್ಲಿ ಬದುಕಲಿಕ್ಕೇ ಅಯೋಗ್ಯರು ಎಂದು ಸೂಚಿಸುವಂತಿರುತ್ತವೆ. ಹುಡುಗಿಗೆ ನೌಕರಿ ಸಿಗಲು, ಹುಡುಗ ಒಲಿಯಲು ಎಲ್ಲವಕ್ಕೂ ಬೆಳ್ಳಗಾಗಿರಬೇಕು. ಹಾಗೆ ಶ್ವೇತವರ್ಣೀಯರಾಗಿರಲು ಮಹಿಳೆಯರು ತಮ್ಮ ಬ್ಯೂಟಿಕ್ರೀಂ ಲೇಪಿಸಿಕೊಳ್ಳಬೇಕು ಎಂಬ ಧಾಟಿ ಇವುಗಳದ್ದು.
ಇವನ್ನೆಲ್ಲ ಆ ಕ್ಷಣದಲ್ಲಿ ಒಂದು ತಮಾಷೆಯನ್ನಾಗಿ ನೋಡಿ ಮರೆತುಬಿಡಬಹುದು. ಆದರೆ ಒಂದೊಮ್ಮೆ ಸಿನಿಮಾಗಳು ಮಾಡಿದಂತೆ ಇವತ್ತಿನ ಜಾಹಿರಾತುಗಳೂ ಸಹ ಮಹಿಳೆಯ ಕುರಿತಾದ ಒಂದಷ್ಟು ‘ಸ್ಟಿರಿಯೋಟೈಪ್’ಗಳನ್ನು ಹುಟ್ಟುಹಾಕುತ್ತಿವೆ. ಅವು ಹೊರಹಾಕುತ್ತಿರುವ ಸಂದೇಶಗಳು ಮಾತ್ರ ಭಯಾನಕವಾಗಿವೆ.
ಅದೆಷ್ಟೇ ಸ್ವರ್ಗಾನುಭೂತಿಯ ಸೆಂಟ್ ಆಗಿರಲಿ. ಯಾವ ಮಹಿಳೆಯಾದರೂ ಹಿಂದು-ಮುಂದು ಯೋಚಿಸದೇ ಸೆಂಟ್ ಪೂಸಿಕೊಂಡ ಹುಡುಗನನ್ನು ತಬ್ಬಿಕೊಂಡು ಬಿಡುತ್ತಾಳೆಯೇ? ಕೇವಲ ಸೆಂಟ್ ಪೂಸಿಕೊಂಡ ಮಾತ್ರಕ್ಕೆ ಹುಡುಗಿಯರನ್ನೆಲ್ಲಾ ವಶವಾಗಿಸಿಕೊಂಡುಬಿಡಬಹುದು ಎನ್ನಲು ಅವರೇನು ಅಷ್ಟು ಅಗ್ಗಕ್ಕೆ ಬಿದ್ದವರಾ?
ಇದನ್ನು ಕೇವಲ ಒಂದು ತಮಾಷೆಯ ಜಾಹಿರಾತು ಎಂದುಕೊಳ್ಳುವುದಕ್ಕೆ ಮೊದಲು ತುಸು ಯೋಚಿಸಬೇಕಾಗಿದೆ. ಉತ್ಪನ್ನದ ಹೆಚ್ಚುಗಾರಿಕೆ ಚಿತ್ರಿಸುವ ಭರದಲ್ಲಿ ವ್ಯಕ್ತಿತ್ವವನ್ನು ಇಷ್ಟು ಕೇವಲವಾಗಿ ತೋರ್ಪಡಿಸಿದರೆ ಹೇಗೆ? ಇದನ್ನು ಗೌರವಯುತವಾಗಿ ಚಿತ್ರಿಸುವ ಎಲ್ಲ ಅವಕಾಶಗಳಿದ್ದವು. ಸೆಂಟ್ ಪೂಸಿಕೊಂಡವನತ್ತ ಒಂದು ವಾರೆ ನೋಟ, ಮುಗಳ್ನಗು.. ಇಷ್ಟರ ಬಗ್ಗೆ ತಕರಾರಿಲ್ಲ. ಒಂದು ಉತ್ತಮ ಸುಗಂಧಕ್ಕೆ ಅಷ್ಟರಮಟ್ಟಿಗಿನ ತಾಕತ್ತಿದ್ದರೆ ಅದರಲ್ಲೇನು ಅಸಹಜವಿಲ್ಲ ಬಿಡಿ. ತೀರ ತನ್ನತನವನ್ನೇ ಮರೆತು ಸೆಂಟ್ ಹಾಕಿಕೊಂಡವನಿಗೆ ಸರ್ವಸ್ವವನ್ನೂ ಅರ್ಪಿಸುವ ಗತಿ ಯಾವ ಹುಡುಗಿಗೂ ಬಂದಿಲ್ಲ.
ಆಕರ್ಷಣೆ ಎನ್ನೋದು ಒಟ್ಟಾರೆ ವ್ಯಕ್ತಿತ್ವದ ಪ್ರಭಾವದಿಂದ ಹುಟ್ಟೋದು. ಒಬ್ಬ ವ್ಯಕ್ತಿಯ ಮಾತು, ನಡೆ, ಆತನ ಹವ್ಯಾಸ ಇವೆಲ್ಲ ಒಟ್ಟುಗೊಂಡರೆ ಆತನೆಡೆಗೆ ಒಂದು ಆಕರ್ಷಣೆ ಬೆಳೆಯುತ್ತದೆ ಎನ್ನುವ ಅಂಶ ಒಪ್ಪಬಹುದು. ಈ ಹಂತದಲ್ಲಿ ಆತನ ಉಡುಗೆ-ತೊಡುಗೆಗಳೂ ಒಂದಷ್ಟು ಪ್ರಭಾವ ಬೀರುತ್ತವೆ ಅನ್ನೋದನ್ನು ಒಪ್ಪೋಣ. ಆದರೆ ಬಾಹ್ಯ ಸೌಂದರ್ಯವೇ ವ್ಯಕ್ತಿತ್ವವಲ್ಲವಲ್ಲ? ಬಾಹ್ಯ ಸೌಂದರ್ಯವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಒಬ್ಬ ವ್ಯಕ್ತಿ ಇನ್ನೊಬ್ಬನಿಗೆ ಶರಣಾಗುತ್ತಾನೆ ಎನ್ನುವುದು ಆತನ ಬುದ್ಧಿಮಟ್ಟವನ್ನೇ ಗೇಲಿ ಮಾಡಿದಂತೆ.
ನೌಕರಿಗಾಗಿ ಹುಡುಕಾಡುತ್ತಿರುವ ಹುಡುಗಿ ಸುಂದರಿಯಾಗಿರಲೇಬೇಕು. ಹಾಗಂತ ಹೇಳುವಂತಿರುತ್ತವೆ ಬ್ಯೂಟಿ ಕ್ರೀಂ ಜಾಹಿರಾತುಗಳು. ಅಂದರೆ ಅವಳ ಬುದ್ಧಿವಂತಿಕೆ, ಪಡೆದ ಮಾರ್ಕ್ಸು, ವ್ಯವಹಾರ ಕುಶಲತೆ ಇತ್ಯಾದಿ ಗುಣಗಳೆಲ್ಲವೂ ಗೌಣ ಎಂದಂತಾಯಿತು. ವಾಸ್ತವದಲ್ಲಿ ಕಪ್ಪು ಸೌಂದರ್ಯವೇ ಅಲ್ಲ ಎಂದಂತಾಯಿತು. ಇನ್ನೂ ಕೆಟ್ಟದೆನಿಸುವುದೇನೆಂದರೆ, ಇಂಥ ಜಾಹಿರಾತುಗಳು ಬಿಂಬಿಸುವ ಪ್ರಕಾರ ಮೇಲಧಿಕಾರಿಗಳನ್ನು ಮೆಚ್ಚಿಸಲು ನಿಮ್ಮ ಸೌಂದರ್ಯವೊಂದೇ ಮಾರ್ಗ!
ನೋಡಲು ಕಪ್ಪಾಗಿರುವ ಆದರೆ ವಿಷಯಜ್ಞಾನ ಉತ್ತಮವಾಗಿರುವ ಹುಡುಗಿಯರದೇನು ಕತೆ? ಅವರೆಲ್ಲ ನಮ್ಮ ಕಂಪನಿಯ ಕ್ರೀಂ ಹಚ್ಚಿಕೊಳ್ಳಲಿ ಎಂಬುದು ವ್ಯಾಪಾರದ ಮಾತಾಯಿತು. ಆದರೆ ಹಾಗೆ ಹೇಳುವವರಿಗೂ ಗೊತ್ತಿರುವ ವಿಷಯವೆಂದರೆ ಕ್ರಿಂ ಹಚ್ಚಿಕೊಂಡ ಮಾತ್ರಕ್ಕೆ ಯಾರೂ ಸುರ ಸುಂದರಿಯರಾಗುವುದಿಲ್ಲ. ಬೆಳ್ಳಗಾದರೂ ತೀರಾ ಜಾಹಿರಾತು ತೋರಿಸಿದ ಮಟ್ಟಕ್ಕೆ ತ್ವಚೆ ಬದಲಾಗುವುದಿಲ್ಲ. ಅಂದ ಮೇಲೆ ಕೊನೆಗೂ ಕಪ್ಪಾಗಿಯೇ ಉಳಿಯುವವರ ಮನದಲ್ಲಿ ಈ ರೀತಿಯ ಸಂದೇಶಗಳು ಎಂಥ ಭಾವನೆ ಹುಟ್ಟು ಹಾಕಬಹುದು? ಕಪ್ಪೆಂಬ ಕೀಳರಿಮೆ ಅವರನ್ನು ಕಿತ್ತು ತಿನ್ನದಿರದೇ?
ಇದೂ ಒಂದು ಸಂಚು..
ಜಾಹಿರಾತಿನಲ್ಲಿ ಮಹಿಳೆಗೆ ಪ್ರಾಮುಖ್ಯತೆ ಬಂದು ಆಕೆ ಕೈತುಂಬ ಕಮಾಯಿಸುವಂತಾದರೆ ನಿಮಗೇನು ಹೊಟ್ಟೆ ಉರಿ? ಹೀಗೂ ಒಂದು ವಾದ ಹೂಡಿಬಿಡಬಹುದು. ಆದರೆ, ಸ್ವಾತಂತ್ರ್ಯದ ಹೆಸರಲ್ಲಿ ಮಹಿಳೆಯನ್ನು ಬೇಕಾಬಿಟ್ಟಿ ಚಿತ್ರಿಸುವುದರಲ್ಲೂ ಮತ್ತದೇ ಪುರುಷ ಪ್ರಧಾನ ವ್ಯವಸ್ಥೆಯ ಸಂಚಿದೆ. ಮಹಿಳೆಗೆ ವಿದ್ಯಾಭ್ಯಾಸ ನಿರಾಕರಿಸಿ ಅವಳನ್ನು ಒಳಮನೆಯಲ್ಲಿ ಕೂಡಿಹಾಕಿದ್ದರಲ್ಲಿ ಆಕೆಯನ್ನು ತನಗೆ ಬೇಕಾದಂತೆ ಬಳಸಿಕೊಳ್ಳಬಹುದೆಂಬ ಧೂರ್ತತೆಯಿತ್ತು. ಇದೀಗ ಸ್ವಾತಂತ್ರ್ಯದ ಹೆಸರಲ್ಲಿ ನೀನು ಎಷ್ಟಾದರೂ ಬಟ್ಟೆ ಬಿಚ್ಚು , ಸೌಂದರ್ಯವೇ ಎಲ್ಲ ಅನ್ನುತ್ತಿರುವುದರಲ್ಲೂ ಸಹ ಆಕೆಯನ್ನು ಸ್ವೇಚ್ಛೆಗೆ ತಿರುಗಿಸಿ ತನ್ನಿಷ್ಟಕ್ಕೆ ಬಳಸಿಕೊಳ್ಳುವ ಧೋರಣೆಯಿದೆ.
ಸ್ಟಿರಿಯೋಟೈಪ್
ಯಾವುದೋ ಒಂದು ವ್ಯತಿರಿಕ್ತ ಸನ್ನಿವೇಶವನ್ನಿರಿಸಿ ಹೆಣ್ಣನ್ನು ಚಿತ್ರಿಸುವುದು ಮಾಧ್ಯಮಗಳಿಗೆ ಮೊದಲಿನಿಂದಲೂ ಬೆಳೆದು ಬಂದಿರುವ ವ್ಯಾ. ಹಳೆಯ ಚಲನಚಿತ್ರಗಳನ್ನು ಗಮನಿಸಿದರೆ ಅಲ್ಲಿ ಅಸಹಾಯಕಳಾಗಿ ಭೋರಿಡುವ ಹೆಣ್ಣಿನ ಪಾತ್ರ ದಂಡಿಯಾಗಿ ಬಂದು ಹೋಗಿದೆ. ಯಾವತ್ತೂ ಗಂಡನಿಗೆ ವಿಧೇಯಳಾಗಿರುವ ಮತ್ತು ಹಾಗೆಯೇ ಇರಬೇಕಾದ ಚಿತ್ರಣ. ಗಂಡ ಸತ್ತು ಹೋದರೆ ನಂತರ ಬದುಕೇ ಇಲ್ಲದಂತೆ ಬವಣೆ ಪಡುವ, ಗೋಳು ತಾಳಲಾರದೇ ಆತ್ಮಹತ್ಯೆಗೆ ಎಳಸಿಬಿಡುವ ಪಾತ್ರಗಳಲ್ಲಿ ಸಾಕಷ್ಟು ಸಾರಿ ಆಕೆಯನ್ನು ನೋಡಿಯಾಗಿದೆ. ತಮಾಷೆಯೆಂದರೆ, ಒಬ್ಬ ಬಾಸ್ನ ಪರ್ಸನಲ್ ಸೆಕ್ರೆಟರಿ ಎಂದರೆ ಅವಳು ಹೆಣ್ಣೇ ಆಗಿರಬೇಕು. ಅದರಲ್ಲೂ ಸುರಸುಂದರಿಯಾಗಿದ್ದಿರಬೇಕು ಎಂಬ ಮಟ್ಟಿಗೆ ಕಾದಂಬರಿ ಹಾಗೂ ಸಿನಿಮಾಗಳು ನಮಗೆ ಕಲ್ಪನೆಯನ್ನು ಕಟ್ಟಿಕೊಟ್ಟಿವೆ.
ಅಂಥದೇ ಒಮ್ಮುಖದ ಚಿತ್ರಣ ನೀಡುವತ್ತ ಈಗಿನ ಜಾಹಿರಾತುಗಳೂ ಹೆಜ್ಜೆ ಇಟ್ಟಿವೆ. ನಿರ್ದಿಷ್ಟ ಉತ್ಪನ್ನವೊಂದನ್ನು ಬಳಸುವ ಪುರುಷನ ಬಗಲಿಗೆ ಹಿಂದೆ ಮುಂದೆ ಯೋಚಿಸದೆ ಜೋತು ಬೀಳುವವರಂತೆ ಹುಡುಗಿಯರನ್ನು ಚಿತ್ರಿಸಲಾಗುತ್ತಿದೆ.
-ಚೈತನ್ಯ ಹೆಗಡೆ
8 comments October 14, 2008
ನನ್ನೂರಿನಲ್ಲಿ ದಸರೆಯ ಸಂಭ್ರಮ
ಈಗಂತೂ ಇಲ್ಲಿನ ಬೀದಿಗಳಲ್ಲಿ ನಡೆಯುವುದೆಂದರೆ ಬಲು ಮಜವಾದ ಸಂಗತಿ. ಮೈ ತುಂಬ ಬೆಳಕಿನ ಬಲ್ಬುಗಳನ್ನು ಹೊದ್ದು ನಿಂತ ಅರಮನೆ, ಹಬ್ಬಕ್ಕೆಂದು ಹೊಸಲಂಗ ತೊಟ್ಟ ಹುಡುಗಿಯಂತೆ ಬಣ್ಣ ಬಳಿಸಿಕೊಂಡು ಸಿಂಗರಿಸಿ ನಿಂತ ಸರ್ಕಾರಿ ಕಟ್ಟಡಗಳು, ರಾತ್ರಿ ಹೊತ್ತಲ್ಲಿ ಹಸಿರು ಬೆಳಕಿನ ಹೊಂಬೆಳಕಲ್ಲಿ ಅದ್ದು ನಿಂತಂತೆ ಕಾಣುವ ಕಾರ್ಪೋರೇಷನ್, ಚೆಲುಂವಂಬಾ , ಆಯುರ್ವೇದಾ ಆಸ್ಪತ್ರೆ, ಟೌನ್ ಹಾಲ್, ಕ್ರಾಫರ್ಡ್ ಹಾಲ್ ಮುಂತಾದ ಬಿಲ್ಡಿಂಗು, ಮಿರಮಿರನೆ ಹೊಳೆಯುವ ಕೆ ಆರ್ ವೃತ್ತ, ಕೆ ಆರ್ ಆಸ್ಪತ್ರೆ ವೃತ್ತಗಳು, ಕತ್ತಲಲ್ಲಿ ಥೇಟ್ ರಥ ಬೀದಿಯಂತೆ ಕಾಣಿಸೋ ಅರಸು ರಸ್ತೆ, ಗಿಜಿಗುಡುವ ಸಯ್ಯಾಜಿರಾವ್- ಮಾರ್ಕೆಟ್ ರಸ್ತೆ, ಹೀಗೆ ಸುಮ್ಮನೆ ಇಲ್ಲೆಲ್ಲ ಅಡ್ಡಾಡುವುದೆಂದರೆ ಖುಷಿಯೋ ಖುಷಿ.
ಬೆಳಗಾಗುವುದೇ ತಡ ಅಲ್ಲಿ ಅರಮನೆಯ ಮುಂಬಾಗ ಆನೆಗಳ ಕಸರತ್ತು ಆರಂಭವಾಗುತ್ತದೆ. ಬಲರಾಮನಂತೂ ತಣ್ಣನೆಯ ನೀರ ಹೊಂಡದಲ್ಲಿ ಮೈ ಅದ್ದಿ ಮತ್ತೆಮ್ಮೊ ನಿದ್ದೆಗೆ ಜಾರುವವನಂತೆ ಮಲಗಿ ಬಿಡುತ್ತಾನೆ. ಮಾವುತರು ಅವನ ಮೈಯೇರಿ ತಿಕ್ಕಿ ತೊಳೆಯುವಾಗ ದೂರಕ್ಕೆ ಇರುವೆಗಳಂತೆಯೇ ಕಾಣುತ್ತಿರುತ್ತಾರೆ. ಪಕ್ಕಕ್ಕೆ ಹೋದರೆ ಅಲ್ಲಿನ ತುಂಟ ಗಜೇಂದ್ರ, ಅಭಿಮನ್ಯು ಕಸರತ್ತು ಮಾಡುತ್ತಿರುವವರಂತೆ ಫೋಸು ಕೊಡುತ್ತಿರುತ್ತಾರೆ. ವಯಸ್ಸಿನಲ್ಲಿ ತನಗಿಂತಲೂ ದೊಡ್ಡವರಾದ ಹೆಣ್ಣಾನೆಗಳಿಗೆ ಲೈನು ಹೊಡೆಯುತ್ತಾ ನಿಂತಿರುತ್ತಾರೆ. ಮಾವುತರ ಮಕ್ಕಳೂ ನಿಧಾನಕ್ಕೆ ಎದ್ದು ಆನೆಗಳೊಂದಿಗೆ ಆಟ ಆಡುತ್ತಾ ನಿಂತಿರುತ್ತಾರೆ.
ದಸರಾ ಆರಂಭಗೊಂಡಿದ್ದರೂ ಇಲ್ಲಿನ ರಸ್ತೆಗಳ ರಿಪೇರಿ ನಿಂತಿಲ್ಲ. ಕಪ್ಪನೆಯ ಟಾರು ಜಲ್ಲಿ ಚೆಲ್ಲಿ ಡಾಂಬರು ಹಾಕುವ ಕಾರ್ಯ ಸಾಗುತ್ತಲೇ ಇದೆ. ತರಾತುರಿಯಲ್ಲಿ ಮಾಡುತ್ತಿರುವ ಕೆಲಸವಾದ್ದರಿಂದ ಯಾವುದೂ ಪೂರ್ಣ ಎನ್ನುವ ಹಾಗಿಲ್ಲ. ಡಾಂಬರು ಮೆತ್ತಿಕೊಂಡ ರಸ್ತೆಗಳು ಅಂಗಿಯ ಮೇಲಿನ ತೇಪೆಗಳಂತೆ ಅಸಹ್ಯವಾಗಿ ಕಾಣುತ್ತಿದ್ದರೂ ಮೈಸೂರಿನ ಅಂದಕ್ಕೆ ಕುತ್ತೇನೂ ಇಲ್ಲ. ಅಂತೆ ಫುಟ್ ಪಾತಿನಲ್ಲಿದ್ದ ಕಲ್ಲು ಕಿತ್ತು ಟೈಲ್ಸ್ ಹಾಕುವ ಹೆಂಗಸರು ಮುಖ ಮೈಗೆಲ್ಲ ಬಿಳಿ ಪುಡಿ ಚೆಲ್ಲಿಕೊಂಡು ಅಂದ ಕಾಣದಂತೆ ಮರೆಮಾಚಿಕೊಂಡಿದ್ದಾರೆ. ಬೀದಿಬದಿಯಲ್ಲಿ ಓಡಾಡುವ ಪಾದಚಾರಿಗಳೂ ಅದರ ಘಾಟು ಗ್ರಹಿಸುತ್ತಿದ್ದಾರೆ.
ವ್ಯಾಪಾರಿಗಳಿಗಂತೂ ಇದು ಸುಗ್ಗಿಯ ಕಾಲ. ನಾನಾ ಆಫರ್ ನೀಡಿ ಅದಷ್ಟು ಗ್ರಾಹಕರನ್ನು ತನ್ನತ್ತ ಸೆಳೆಯುವ , ಭಾರೀ (!) ಡಿಸ್ ಕೌಂಟ್ ಸೇಲ್ ಅಂತ ಬೋರ್ಡು ಬರೆಸಿ ಭರ್ಜರಿ ವ್ಯಾಪಾರದ ನಿರೀಕ್ಷೆಯಲ್ಲಿದ್ದಾರೆ. ದೇವರಾಜ ಮಾರ್ಕೆಟ್ಟಿನಲ್ಲಂತೂ ಎಂದಿನ ಗಿಜಿಗಿಜಿ ಸದ್ದು. ಈಗಲೇ ಹೀಗಾದರೆ ಇನ್ನು ಆಯುಧಪೂಜೆಯ ಹಿಂದಿನ ದಿನ ಇಲ್ಲಿ ಕಾಲಿಡಲು ಜಾಗವಿರುವುದಿಲ್ಲ. ಈಗಾಗಲೇ ಬಹುತೇಕ ಹೋಟೆಲ್ಲುಗಳು ಬುಕ್ ಆಗಿಹೋಗಿವೆ. ಟಾಂಗಾವಾಲಗಳಿಗಂತೂ ಇಂಥ ಸಮಯ ಬಿಟ್ಟರೆ ಸಿಗದು.
ಮಧ್ಯಾಹ್ನ ಬಿಸಿಲು ಕಡಿಮೆಯಾಗುತ್ತಿದ್ದಂತೆ ರಸ್ತೆಯ ಸಾಲುದೀಪಗಳು ಹೊತ್ತಿಕೊಳ್ಳುತ್ತವೆ. ಎಲ್ಲ ಸರಿಯಿದೆಯಾ ಅಂತ ಇನ್ನೊಮ್ಮೆ ಪರೀಕ್ಷಿಸುವ ಕಾರ್ಯ ನಡೆಯುತ್ತದೆ. ಈ ಸಲವಂತೂ ಈ ದೀಪಸಿಂಗಾರಕ್ಕೆ ಕೋಟಿಗಟ್ಟಲೆ ಖರ್ಚು ಮಾಡಲಾಗಿದೆ. ಅರಮನೆ ಅಂಗಳದಿಂದ ಹಿಡಿದು ಬನ್ನಿಮಂಟಪದ ವರೆಗೆ ಸಾಲಾಗಿ ದೀಪ ಜೋಡಿಸಲಾಗಿದೆ. ಸಂಜೆಯಾಗುತ್ತಲೇ ಅವು ತಮ್ಮೆಲ್ಲ ಶಕ್ತಿ ಮೀರುತ್ತಾ ಬೆಳಕು ಚೆಲ್ಲುತ್ತಾ ನಿಲ್ಲುತ್ತಿವೆ. ಸಿಟಿ ಬಸ್ ಸ್ಟಾಂಡಿನ ಪಕ್ಕದ ವನದಲ್ಲಿ, ಕಾರಂಜಿ ಕೆರೆ, ಕುಕ್ಕರಹಳ್ಳಿ ಕೆರೆಗಳ ಏರಿಗಳಲ್ಲಿ ರಾಶಿ ಹೂವುಗಳು ಅರಳಿ ನಿಂತಿವೆ. ಅತ್ತ ಚಾಮುಂಡಿ ಬೆಟ್ಟದಲ್ಲೂ ಇದೇ ಖುಷಿ.
ಇಷ್ಟು ವರ್ಷ ಬರೀ ಕನ್ನಡದ ಭಾವುಟ, ಗಂಡಭೇರುಂಡದ ಭಾವುಟಗಳಷ್ಟನ್ನೇ ನೋಡುತ್ತಿದ್ದೆ. ಈ ಸಲ ಬಣ್ಣಬಣ್ಣದ ತರಾವರಿ ಭಾವುಟಗಳು ಎಲ್ಲೆಂದರಲ್ಲಿ ಸರ್ಕಲ್ಲುಗಳಲ್ಲಿ ನೆಟ್ಟಗೆ ನಿಂತಿವೆ. ಇದೇನು ಸ್ವಾಗತದ ಹೊಸ ವಿಧಾನವೋ ಇಲ್ಲ ಖಾಸಗೀಕರಣದ ಸಂಕೇತವೋ… ಇರಲಿ.
ವಸ್ತು ಪ್ರದರ್ಶನ ಕೂಡ ಸಿದ್ಧಗೊಂಡಿದೆ. ಅದರ ಆವರಣದಲ್ಲೇ ನಾನಾ ಸಾಹಸ ಕ್ರೀಡೆಗಳ ಏರ್ಪಾಟು ಆಗಿದೆ. ಕತ್ತಲಾಗುತ್ತಲೇ ಇಲ್ಲಿನ ಟೌನ್ ಹಾಲ್ , ಜನನ್ಮೋಹನ ಅರಮನೆ, ಅರಮನೆಯ ಮುಂಭಾಗ ಮುಂತಾದ ಕಡೆ ನಾನಾ ಕಾರ್ಯಕ್ರಮಗಳು ನಡೆಯುತ್ತವೆ. ಅತ್ತ ನಮ್ಮ ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾ ಅರ್ಥಾತ್ ನಮ್ಮಂಥ ಪಡ್ಡೆ ಐಕಳ ಸಂಭ್ರಮ. ಮೊದಲೆಲ್ಲ ಗಂಗೋತ್ರಿಯ ಓಪನ್ ಏರ್ ಥಿಯೇಟರಿನಲ್ಲಿ ನಡೆಯುತ್ತಿದ್ದ ಕಳೆದೆರಡು ವರ್ಷದಿಂದ ಇಲ್ಲಿ ನಡೆಯುತ್ತಿದೆ. ಈ ಸಲ ಕೈಲಾಸ್ ಖೇರ್ , ಶಂಕರ್ ಮಹದೇವನ್ ರ ಗಾನಸುಧೆಯಿಂದ ಹಿಡಿದು ಶಿವಮಣಿ -ಪ್ರವೀಣ್ ಗೋಡ್ಕಿಂಡಿ ಜುಗಲ್ ಬಂದಿಯೂ ಇದೆಯಂತೆ. ಒಂದು ದಿನವಾದರೂ ಹೋಗಬೇಕು. ಯಾರು ಬರಲಿ ಬಿಡಲಿ ನಮ್ಮ ಮಹಾರಾಜ ಕಾಲೇಜು- ಹಾಸ್ಟೆಲ್ಲಿನ ಹುಡುಗರು ತಪ್ಪದೇ ಬರುತ್ತಾರೆ. ಏಕೆಂದರೆ… ಅಲ್ಲಿಗೆ ಮಸ್ತ್ ಹುಡ್ಗೀರು ಬರ್ತಾರೆ.
ಇನ್ನು ನಮ್ಮ ರಂಗಾಯಣ- ಕಲಾಮಂದಿರಗಳು ಹೇಗೆ ಸಿಂಗರಿಸಿಕೊಂಡಿವೆಯೋ ಎನೋ? ತಿಂಗಳಾಯಿತು ಅತ್ತ ಹೋಗಿ. ಅಲ್ಲಿ ಒಂದಿಷ್ಟು ಹೊತ್ತು ಕೂತು ಟೀ ಹೀರುವುದೇ ಒಂದು ಖುಷಿ. ಈ ಬಾರಿ ಒಂದೆರಡು ನಾಟಕವಾದರೂ ನೋಡಬೇಕು.
ಇತಿಹಾಸದ ಪುಸ್ತಕಗಳಲ್ಲಿ ಹಬ್ಬಹರಿದಿನಗಳ ಆಚರಣೆ ಬಗ್ಗೆ ಓದಿದ್ದು ಉಂಟು. ವಿಜಯನಗರದಲ್ಲೂ ದಸರಾ ಆಚರಿಸುತ್ತಿದ್ದರಂತೆ. ಅದೂ ಹೀಗೆ ಇರಬಹುದಾ? ಗೊತ್ತಿಲ್ಲ. ಸ್ವರೂಪಗಳು ಏನೇ ಬದಲಾಗಿದ್ದರೂ ಆಚರಣೆ ಮತ್ತದರ ಸಂಭ್ರಮ ಮಾತ್ರ ಬದಲಾಗಿಲ್ಲ ಅನಿಸುತ್ತಿದೆ.
ಕಳೆದ ಬಾರಿ ಅಂಬಾರಿ ನೋಡಲು ಕೆ ಆರ್ ವೃತ್ತದಲ್ಲಿ ನಿಂತಿದ್ದೆ. ಅಂಬಾರಿ ಆನೆ ಹೊರಬರುವ ಹೊತ್ತಿಗೆ ಮೈಯೆಲ್ಲ ಬೆವರಿನಲ್ಲಿ ಅದ್ದಿಹೋಗಿತ್ತು. ಅಷ್ಟು ನೂಕುನುಗ್ಗಲು. ಈ ಬಾರಿ ನನ್ನ ದುರಾದೃಷ್ಟಕ್ಕೆಂಬಂತೆ ಬಲಗಾಲು ಸ್ವಲ್ಪ ಮುರಿದು ಊದಿಕೊಂಡಿದೆ. ಸದ್ಯ ಕುಂಟುತ್ತಲೇ ನಡೆಯುತ್ತಿದ್ದೇನೆ. ಡಾಕ್ಟರ್ ಮಾತ್ರ ಏನೂ ಆಗೋದಿಲ್ಲ ಬಿಡಯ್ಯ ಅಂತ ಧೈರ್ಯ ತುಂಬಿದ್ದಾರೆ. ಏನಾಗುವುದೋ ಕಾದು ನೋಡಬೇಕು.
(ಪೋಸ್ಟರ್ ಚಿತ್ರ- ಪ್ರವೀಣ್ ಬಣಗಿ)
1 comment October 1, 2008
ನಿಮ್ಮ ಸಹಾಯ-ಸಲಹೆ ಬೇಕಿದೆ
ಸುಮಾರು ಒಂದು ತಿಂಗಳಿಂದ ಹೀಗಾಗಿದೆ. ವಿಷಯ ಇಷ್ಟೆ ನನ್ನ ಬ್ಲಾಗಿನ ಆರ್ ಎಸ್ ಎಸ್ ಫೀಡ್ ಕೈಕೊಟ್ಟಿದೆ. ಫೈರ್ ಫಾಕ್ಸ್ ನಲ್ಲಿ ಚೆನ್ನಾಗಿ ಕೆಲಸ ಮಾಡುವ ಫೀಡ್ ಇಂಟರ್ ನೆಟ್ ಎಕ್ಸ್ ಫ್ಲೋರ್ ನಲ್ಲಿ ಮಾತ್ರ ಕಾಣಿಸಿಕೊಳ್ಳುವುದಿಲ್ಲ. ಅದ್ಯಾವುದೂ ಲೇಖನದಲ್ಲಿ ಎರರ್ ಆಗಿದೆ. ಅದನ್ನು ಸರಿಪಡಿಸಿ ನಂತರ ರೀಫ್ರೆಶ್ ಮಾಡಿ ಅಂತ ತೋರಿಸುತ್ತದೆ. ಹಾಗೇ ಮಾಡಿದರೂ ಸರಿಯಾಗುತ್ತಿಲ್ಲ. ಅದು ತೋರಿಸಿದ ಎರರ್ ಲೇಖನವನ್ನು ತಿದ್ದಿ ತೀಡಿ ಒಪ್ಪಗೊಳಿಸಿ ಏನೆಲ್ಲ ಮಾಡಿದರೂ ಪ್ರಯೋಜನವಾಗಿಲ್ಲ.
ಮೊನ್ನೆ ಮೊನ್ನೆ ಅಪರೂಪಕ್ಕೆ ಕರೆ ಹಚ್ಚಿದ ಬ್ಲಾಗ್ ಗೆಳೆಯರೊಬ್ಬರಿಂದ ಈ ಸಂಗತಿ ಬಯಲಾಯಿತು. ಅದೇನಂದರೆ ಅವರು ಕನ್ನಡದಲ್ಲಿ ಅಪ್ ಲೋಡ್ ಆಗುವ ಎಲ್ಲ ಹೊಸ ಲೇಖನಗಳನ್ನೂ ಬರಹದ ಕನ್ನಡಲೋಕದ ಲಿಂಕಿನಲ್ಲಿ ತಪ್ಪದೇ ನೋಡುತ್ತಾರಂತೆ. ಅಲ್ಲಿ ಒಂದೂವರೆ ತಿಂಗಳಿನಿಂದ ನನ್ನ ಲೇಖನದ ಲಿಂಕ್ ಕಾಣಿಸಿಕೊಂಡಿಲ್ಲವಂತೆ. ಕರೆ ಮಾಡಿದ್ದೇ ‘ಏನಪ್ಪ ದೊಡ್ಡ ಮನುಷ್ಯ, ಬರೆಯೋದು ಎಷ್ಟು ಕಷ್ಟ ಅಂತ ಈಗಾಗಲಾದರೂ ತಿಳಿತೋ?’ ಅಂತ ಕ್ಲಾಸ್ ತೆಗೆದುಕೊಂಡರು. ಯಾಕೆ ಅಂತದ್ದಕ್ಕೆ ‘ಮತ್ತೇನಪ್ಪ ತಿಂಗಳಿಂದ ಏನೂ ಬರೆದಿಲ್ಲ. ನಮಗ್ ಮಾತ್ರ ಬರೀತಿರಿ ಅಂತ ಉಪದೇಶ ಮಾಡ್ತಿ’ ಅಂದ್ರು. ನಾನು ಇಲ್ಲ ಸರ್ ವಾರಕ್ಕೊಂದು ಸಾರಿ ಬರೀತಿದೀನಿ… ಅಂತ ರಾಗ ಎಳೆದೆ. ಆಮೇಲೆ ಗೊತ್ತಾಗಿದ್ದು ಬರಹ ಲಿಂಕ್ ನಲ್ಲಿ ನನ್ನ ಬರಹ ಲಿಂಕ್ ಕಾಣಿಸಿಕೊಳ್ಳದ ಕಾರಣ ನಾನು ಬರೀತಾನೇ ಇಲ್ಲ ಅಂತ ಅವರು ತೀರ್ಮಾನ ಮಾಡಿದ್ರು ಅಂತ!
ಇದೇನಾಯಿತಪ್ಪ . ಬರಹದವರು ಕಂಪಿನ ಲಿಂಕ್ ತೆಗೆದುಹಾಕಿದ್ರಾ? ಈ ಬಡವನ ಮೇಲೆ ಯಾಕೀ ಮುನಿಸು ಅಂತಂದುಕೊಂಡು ಕನ್ನಡಲೋಕದ ವಾಸು ಸರ್ ಗೆ ಒಂದು ಮೇಲ್ ಮಾಡಿ , ನನ್ನ ಬ್ಲಾಗ್ ಲಿಂಕ್ ಬಿಟ್ಟುಹೋಗಿದೆ. ದಯಮಾಡಿ ಸೇರಿಸಿಕೊಳ್ಳಿ ಅಂತ ಕೊರೆದೆ. ಅವರು ಸಾವಧಾನದಿಂದ ಪ್ರತಿಕ್ರಿಯಿಸಿ, ನಿಮ್ಮ ಬ್ಲಾಗ್ ನ ಆರ್ ಎಸ್ ಎಸ್ ಫೀಡ್ ಕೆಲಸ ಮಾಡ್ತಿಲ್ಲ ಅಂತ ಸಾಕ್ಷಿ ಸಮೇತ (ಲಿಂಕ್ ಕಳಿಸಿ) ತಿಳಿಸಿದ್ರು. ಆಗಾಲೇ ನನಗೀ ಸತ್ಯ ಗೊತ್ತಾಗಿದ್ದು.
ಈ ವಿಘ್ನ ನಿವಾರಣೆಗೆ ಒಂದಿಬ್ಬರು ತಕ್ಕ ತಜ್ಝರನ್ನು ಸಂಪರ್ಕಿಸಿದರೂ ಪರಿಹಾರ ಮಾತ್ರ ಸಿಕ್ಕಿಲ್ಲ. ಕೆಲವರು ನಿಮ್ಮ ಎಕ್ಸ್ ಫ್ಲೋರ್ ಅಪ್ ಡೇಟ್ ಆಗಿಲ್ಲ ಅನ್ಸುತ್ತೆ ಅಂದ್ರು. ಇನ್ನು ಇನ್ನೊಬ್ಬರು ವೈರೆಸ್ ಸೇರಿಕೊಂಡಿರಬೇಕು, ಹಿಸ್ಟರಿ ಡೆಲಿಟ್ ಮಾಡಿ ಮತ್ತೆ ರೀ ಸ್ಟಾರ್ಟ್ ಮಾಡಿ ಅಂದ್ರು. ಊಹು…. ಏನು ಮಾಡಿದ್ರು ಏನೂ ಆಗ್ತಾ ಇಲ್ಲ.
ನಾನು ಬಹುತೇಕ ಇಂಟರ್ ನೆಟ್ ಎಕ್ಸ್ ಫ್ಳೋರ್ ಬಳಸ್ತೀನಿ. ನಿಜಕ್ಕೂ ಇಲ್ಲಿ ಸಮಸ್ಯೆ ಇರೋದೆಲ್ಲಿ? ಇದರಿಂದೇನು ತೊಂದರೆ? ಈ ಎರರ್ ಸರಿಮಾಡೋದು ಹೇಗೆ? ಇತ್ಯಾದಿ ಸಂಗತಿಗಳ ಬಗ್ಗೆ, ಹಿರಿಯ, ಅನುಭವಸ್ಥ, ತಜ್ಝ ಬ್ಲಾಗಿಗರು ತಿಳಿಸಿಕೊಡುವುದಾದರೆ ನಾನು ರುಣಿ. ಇದರಿಂದ ನನಗೆ , ನನ್ನಂತ ನಾಲ್ಕಾರು ಕಿರೀ-ಮರಿ ಬ್ಲಾಗಿಗರಿಗೆ ಅನುಕೂಲವಾದೀತು…
(ಅಂದ ಹಾಗೆ ಈ ಲೇಖನವನ್ನು ಫೈರ್ ಫಾಕ್ಸ್ ನಿಂದ ಅಪ್ ಲೋಡ್ ಮಾಡುತ್ತಿದ್ದೇನೆ. )
5 comments September 27, 2008
ಬಿಳಿ ಕಾಗೆ ಹಿಡಿಯಲು ಬರುವಿರಾ?
‘ಶ್ರೀರಂಗಪಟ್ಟಣದ ರಂಗನ ಮೇಲೆ (ಅಥವಾ ದೇವಸ್ಥಾನ) ಬಿಳಿಕಾಗೆ ಕೂತು ನೀರು ಕುಡಿಯುತ್ತದೆ. ಹಾಗಾದ ದಿನ ಕೆಆರ್ ಎಸ್ ಅಣೆಕಟ್ಟೆ ಒಡೆದು ಮೈಸೂರು ನೀರಿನಲ್ಲಿ ಮುಳುಗುತ್ತದೆ.’ ಹಾಗಂತ ಯಾರೋ ಸ್ವಾಮಿಗಳು ಹೇಳಿದ್ದು, ಮುನ್ನೆಚ್ಚರಿಕೆ ಕೈಗೊಳ್ಳಿ ಅಂತ ಎಚ್ಚರಿಸಿದ್ದು ಗೊತ್ತಿರಬಹುದು. ಪತ್ರಿಕೆಗಳು, ಟೀವಿ ಚಾನಲ್ಲುಗಳೂ ಈ ಸುದ್ದಿಯನ್ನ ಪ್ರಕಟ ಮಾಡಿದ್ದವು.
ಹೀಗೆ ಹಬ್ಬಿದ ಸುದ್ದಿ ಹೇಗೆಲ್ಲ ರೂಪ ಪಡೆದು ಕಡೆಗೆ ಮತ್ತೇನೇನೋ ಸೇರಿಸಿಕೊಂಡು ಒಂದು ಭಯಂಕರ ಸುದ್ದಿಯಾಗಿ ಬಿಟ್ಟಿದೆ. ಸದ್ಯ ಇಲ್ಲಿ ಮೈಸೂರಿನ ಯಾವುದೇ ಹಳ್ಳಿಗೆ ಹೋದರೂ, ಇಲ್ಲಿನ ಟೀ ಅಂಗಡಿಯಲ್ಲಿ, ಅರಳೀಕಟ್ಟೆಯಲ್ಲಿ ಇದೇ ಮಾತು. ತಮಾಷೆ ಅಂದ್ರೆ ಮೈಸೂರಿನಲ್ಲಿ ಜಲಪ್ರಳಯವಾಗುತ್ತದೆ ಅನ್ನುವುದರಿಂದ ಹಿಡಿದು , ಈಗ ನಡಿತಿರೋ ಬಿಗ್ ಬ್ಯಾಂಗ್ ನ ಪ್ರಯೋಗದಿಂದ ಭೂಮಿ ನಾಶ ಆಗುತ್ತೆ ಅನ್ನುವವರೆಗೂ, ಅದಕ್ಕೂ ಬಿಳಿಕಾಗೆಗೂ ಸಂಬಂಧ ಕಟ್ಟಿ ಮಾತನಾಡುತ್ತಿರುವುದು!
ಮೊನ್ನೆ ಮೊನ್ನೆ ಸ್ವಾಮಿಗಳು ಹೇಳಿದ ರೀತಿಯಲ್ಲೇ ಶ್ರೀರಂಗಪಟ್ಟಣದಲ್ಲಿ ಬಿಳಿಕಾಗೆ ಕಾಣಿಸಿಕೊಂಡಿದ್ದು, ಅದಕ್ಕೆ ಅಪಶಕುನವೇನೋ ಎಂಬಂತೆ ಯಾವತ್ತು ಹೊರಗೆ ತರದಿದ್ದ ದೇವರ ಮೂರ್ತಿಯೊಂದು ಬಿದ್ದು ಮುಕ್ಕಾದದ್ದು ಎಲ್ಲವನ್ನೂ ಪತ್ರಿಕೆಗಳು ವರದಿ ಮಾಡಿ ಜನರಲ್ಲಿ ಇನ್ನಷ್ಟು ಭಯ ಹುಟ್ಟಿಸಿದ್ದಂತೂ ನಿಜ. ಹಾಗಾದ ಮರುದಿನವೇ ನಮ್ಮ ಪಕ್ಕದ ಮನೆಗಳಲ್ಲಿ (ನಮ್ಮ ಮನೆಯೂ ಸೇರಿ) ಈ ಬಗ್ಗೆ ಭಾರೀ ಚರ್ಚೆ ನಡೀತು. ಇದ್ದಬದ್ದ ಹೆಂಗಸರೆಲ್ಲ ಸೇರಿ ಮುಂಬರುವ ಜಪಪ್ರಳಯದ ಸಾಧಕ- ಭಾದಕ ಕುರಿತು ಗಂಭೀರ ಚರ್ಚೆಗೆ ತೊಡಗಿದ್ರು. ಚಿನ್ನ-ಗಿನ್ನ ಮಾಡಿಸೋದು , ಆಸ್ತಿ ಮಾಡೋದು ಬಿಟ್ಟು ಇರೋವಷ್ಟು ದಿನ ಸುಖವಾಗಿ ತಿಂದುಂಡು ಬದುಕಬೇಕಪ್ಪಾ ಅಂತೆಲ್ಲ ನಿರ್ಧಾರಕ್ಕೆ ಬರೋಕೆ ಶುರುಮಾಡಿದ್ರು.
ಇಷ್ಟೆಲ್ಲವನ್ನೂ ಕೇಳಿಸಿಯೂ ಕೇಳಿಸದವನಂತಿದ್ದ ನನಗೆ ಅದ್ಯಾಕೋ ಈ ಬಗ್ಗೆ ಭಾರೀ ಕುತೂಹಲ ಬಂದುಬಿಟ್ಟಿದೆ. ಮೊನ್ನೆ ಶ್ರೀರಂಗಪಟ್ಟಣದಲ್ಲಿ ನಿಜವಾಗಿ ಬಿಳಿಕಾಗೆ ಕಾಣಿಸಿಕೊಂಡಿತಾ? ಅಥವಾ ಯಾರೋ ಕಾಣಿಸಿಕೊಂಡಂತೆ ಮಾಡಿ ಸುದ್ದಿ ಹಬ್ಬಿಸಿದರಾ? ಇದೆಲ್ಲ ಜನರನ್ನು ತಮ್ಮತ್ತ ಸೆಳೆಯಲು ಪವಾಡದಾರಿಗಳು ಮಾಡುತ್ತಿರುವ ಸಂಚಾ? ಒಂದು ವೇಳೆ ಕಾಣಿಸಿಕೊಂಡಿದ್ದೇ ಆದ್ರೆ ಅದು ಎಲ್ಲಿಂದ ಬಂತು? (ಯಾರೋ ಹೇಳಿದ್ರು ಶಿವಾಜಿನಗರ ಮಾರ್ಕೆಟ್ ನಲ್ಲಿ ಬೇಕಾದಷ್ಟು ಬಿಳಿಕಾಗೆಗಳು ಸಿಕ್ಕುತ್ವೆ ಅಂತ) ಯಾರಾದರೂ ಬೇಕಂತ ತಂದು ಬಿಟ್ರಾ? ಅಥವಾ ಅಷ್ಟು ಶ್ರಮ ತೆಗೆದುಕೊಳ್ಳದೇ ಕಪ್ಪು ಕಾಗೆಯೊಂದನ್ನ ಹಿಡಿದು ಅದಕ್ಕೇ ಬಿಳಿ ಬಣ್ಣ ಬಳೆದು ದೇವಸ್ಥಾನಕ್ಕೆ ತಂದು ಬಿಟ್ರಾ? (ಯಾಕಂದ್ರೆ ತಿಂಗಳಿಗೊಮ್ಮೆಯಾದರೂ ಶ್ರೀರಂಗಪಟ್ಟಣಕ್ಕೆ ಹೋಗ್ತಿರ್ತಿನಿ. ಎಂದೂ ಬಿಳಿಕಾಗೆ ಕಾಣಿಸಿಕೊಂಡಿದ್ದಿಲ್ಲ) ಹೀಗೆ ತರಾವರಿ ಕುತೂಹಲೀ ಪ್ರಶ್ನೆಗಳು ನನ್ನನ್ನ ಕಾಡತೊಡಗಿವೆ.
ಅದಕ್ಕೆ ಒಂದು ನಿರ್ಧಾರಕ್ಕೆ ಬಂದಿದ್ದೀನಿ. ಆದದ್ದಾಗಲೀ, ಒಂದು ಭಾನುವಾರ ಪಟ್ಟಣಕ್ಕೆ ಲಗ್ಗೆ ಇಟ್ಟು, ಇಡೀ ದಿನ ಬಿಳಿಕಾಗೆಯನ್ನ ಹುಡುಕೋ ಪ್ರಯತ್ನ ಮಾಡ್ಬೇಕು. ಒಂದು ವೇಳೆ ಸಿಕ್ಕಿದ್ರೆ ಅದನ್ನೊಮ್ಮೆ ನೀರಿನಲ್ಲಿ ತೊಳೆದು ಬಿಡಬೇಕು (ಸರ್ಫ್ ಎಕ್ಸೆಲ್ ಬಳಸಿ). (ಕಾಗೆ ಎಂದಾದರೂ ಕೈಗೆ ಸಿಗುತ್ತಾ, ಅದೂ ಬಿಳಿ ಕಾಗೆ!) ಹಾಗಾದ ಮೇಲೂ ಅದರ ಬಣ್ಣ ಬಯಲಾಗದಿದ್ರೆ , ಅದು ದೇವಸ್ಥಾನದಲ್ಲಿ ಕೂತದ್ದೇಕೆ ಕೇಳಬೇಕು. ಇದೆಲ್ಲ ನಿಜಕ್ಕೂ ನಿಜ ಅನಿಸಿದ್ರೆ , ಭವಿಷ್ಯ ಹೇಳಿದ ಸ್ವಾಮಿಯ ಕಾಲಿನ ಮುಂದೆ ಉದ್ದುದ್ದ ಅಡ್ಡಬಿದ್ದು , ಹಿಂಗೆಲ್ಲ ಯೋಚಿಸಿದಕ್ಕೆ ನನ್ನನ್ನ ಕ್ಷಮಿಸಿ ಅಂತ ಕೇಳ್ಬೇಕು!
ನನ್ನೀ ಹುಚ್ಚು ಸಾಹಸದಲ್ಲಿ ಭಾಗವಹಿಸುವ, (ನನ್ನಂತೇ ಹುಚ್ಚಿರುವ!) ಆಸಕ್ತರು, ಬಿಳಿ ಕಾಗೆ ಹಿಡಿಯಲು ಬರಬಹುದು.
(ವಿ.ಸೂ.: ನಾನಿನ್ನೂ, ಪಟ್ಟಣದ ಕಾಗೆ ಕಪ್ಪೋ, ಬಿಳಿಯೋ ಎಂಬ ದ್ವಂದ್ವದಲ್ಲಿರುವುದರಿಂದ ಸದ್ಯಕ್ಕೆ ಎರಡು ಬಣ್ಣಗಳುಳ್ಳ ಕಾಗೆಯ ಚಿತ್ರ ಕೊಡಲಾಗಿದೆ. ಬಿಳಿಯ ಕಾಗೆ ಸಿಕ್ಕ ನಂತರ (ಸಿಕ್ಕರೆ!, ಅದು ನನ್ನ ಕ್ಯಾಮರಾಕ್ಕೆ ಪೋಸು ಕೊಟ್ಟರೆ) ಅದರ ಚಿತ್ರವನ್ನು ತಪ್ಪದೆ ಪ್ರಕಟಿಸಲಾಗುವುದು.)
ಚಿತ್ರ ಕೃಪೆ: Azmi Bogart
4 comments September 19, 2008
ಇಲ್ಲಿ ಬಂದವರು ಅಲ್ಲಿಗೂ ಹೋಗಿಬನ್ನಿ
ಹೊಸ ಚಿತ್ರ ಬರೆಯುವ ಮನಸ್ಸಿತ್ತು. ಬ್ರಶ್, ಕ್ಯಾನ್ವಾಸ್ ಎಲ್ಲವೂ ಸಿದ್ಧವಿದ್ದವು. ಮೆತ್ತುವುದೊಂದು ಬಾಕಿಯಿತ್ತು. ಈಗ ಅದೂ ಆಗಿದೆ. ‘ಚಿತ್ರ’ ನಿಮ್ಮ ಮುಂದಿದೆ, ‘ಕುಲುಮೆ’ಯೊಟ್ಟಿಗೆ.
ಕುಲುಮೆಯ ಕೊಂಡಿ ಇಲ್ಲಿದೆ: http://chitrakulume.wordpress.com/
ಇಲ್ಲಿ ಬರುವವರು ಅಲ್ಲಿಗೂ ಹೋಗಿಬನ್ನಿ.
Add comment September 15, 2008
ಇದ್ಯಾವ ‘ಇಸಂ’ ಹೇಳ್ತಿರಾ?
ಮಹಿಳಾ ವಾದ (?)ದ ಕುರಿತು ಈಗ ಕನ್ನಡದ ಬ್ಲಾಗುಗಳಲ್ಲಿ ಹಿಂದೆಂದಿಗಿಂತ ಹೆಚ್ಚು ಚರ್ಚೆಯಾಗುತ್ತಿದೆಯಾ? ನನಗಂತೂ ಹಾಗೇ ಅನಿಸುತ್ತಿದೆ. ಚೇತನಾರ ಒಂದು ಗಟ್ಟಿ ಚರ್ಚೆಯನ್ನು ಓದಿ ಮುಗಿಸುತ್ತಿದ್ದಂತೆ, ಅತ್ತ ಅಕ್ಷರವಿಹಾರದಲ್ಲಿ ಇನ್ನೇನೋ ಗಲಾಟೆಯಾಗುತ್ತಿದೆ. ಇನ್ನೊಂದು ಕಡೆ ಸೀಮಾ ಸಣ್ಣದಾಗಿ ಧಮಕಿ ಹಾಕುತ್ತಿದ್ದಾರೆ.
ಇದನ್ನೆಲ್ಲ ಓದುತ್ತ ಕುಳಿತಿರುವಾಗಲೇ , ಇಲ್ಲೇ ಕಣ್ಣೆದುರು ಒಂದು ಪ್ರಸಂಗ ನಡೆಯುತ್ತಿದೆ. ಅದೇನಂತ ಹೇಳ್ತೀನಿ….
ಮಧ್ಯಾಹ್ನ ಆಫೀಸಿನಲ್ಲಿ ಕೆಲಸ ಮಾಡ್ತೀರೋವಾಗ ಡಬ್ ಅಂತ ದೊಡ್ಡ ಶಬ್ದದ ಜೊತೆಗೆ ಬೆಳಕೂ ಒಟ್ಟೊಟ್ಟಿಗೆ ರೂಮಿಗೆ ನುಗ್ಗಿ ಬಂತು. ಏನಪ್ಪ ಅಂತ ಹೊರಗೋಡಿ ನೋಡಿದ್ರೆ ಲೈಟುಕಂಬದ ಮಧ್ಯದಲ್ಲಿ ಒಂದೆರಡು ವಿದ್ಯುತ್ ತಂತಿಗಳು ಸಿಡಿದು ಬಿದ್ದಿದ್ವು. ಸ್ಕೂಲು ಬಿಡೋ ಹೊತ್ತು ಮಕ್ಕಳ್ಯಾರಾದ್ರೂ ಇತ್ತ ಬಂದ್ರೆ ಕಷ್ಟ ಅಂತ ಕೆಇಬಿ ವಿಭಾಗಕ್ಕೆ ಫೋನಾಯಿಸಿದರೂ ರಿಸೀವ್ ಮಾಡಲಿಲ್ಲ. ಇದರ ಯೋಚನೆಯಲ್ಲಿದ್ದಾಗಲೇ ಅದೃಷ್ಟಕ್ಕೇನೋ ಎಂಬಂತೆ ಅವರೇ ಒಟ್ಟೊಟ್ಟಿಗೆ ಎರಡು ಜೀಪಿನಲ್ಲಿ ಬಂದುಬಿಟ್ಟರು!
ಅದರಲ್ಲಿ ಒಬ್ಬರು ಮಹಿಳಾ ಸೂಪರ್ ವೈಸರ್. ಈಗಷ್ಟೆ ಕೆಲಸಕ್ಕೆ ಸೇರಿದ ಹುಡುಗಿ ಅನ್ನಿಸುತ್ತೆ. ಬಂದವರೇ ಕಡಿದ ತಂತಿ ನೋಡಿ, ಏನಾಗಿರಬಹುದು ಅಂತ ಉಳಿದ ಕೆಲಸಗಾರರತ್ತ ಮುಖ ಮಾಡಿದರು. ಅವರು ಏನೂ ಆಗಿಲ್ಲ ಎಂಬಂತೆ ತಮ್ಮ ಪಾಡಿಗೆ ಕೆಲಸದಲ್ಲಿ ತೊಡಗಿಕೊಂಡ್ರು. ಅಷ್ಟರಲ್ಲೇ ಯಾರೋ ಮೇಲಧಿಕಾರಿಗಳು ಬಂದು ಆ ಹುಡುಗಿ ಪಕ್ಕದಲ್ಲೇ ನಿಂತು ಒಂದಿಷ್ಟು ಹೊತ್ತು ಮಾತನಾಡಿ, ಉಳಿದರನ್ನೊಮ್ಮೆ ಸುಮ್ನೆ ನೋಡಿ ಹೋದ್ರು. ಇದೆಲ್ಲ ಇಲ್ಲಿ ಉಳಿದವರಿಗೆ ಸ್ವಲ್ಪ ಹೊಟ್ಟೆಕಿಚ್ಚು ತಂದಿರಬೇಕು. ಆ ಮಹಿಳೆ ಏನೂ ಹೇಳಿದ್ರು ಇವರು ಕಿವಿಗೆ ಹಾಕಿಕೊಳ್ಳುವ ಹಾಗೇ ಕಾಣ್ತಾ ಇಲ್ಲ. ಕೇಳಿಸಿಕೊಂಡವರಂತೆ ನಟಿಸಿ, ಆಕೆ ಬದಿಗೆ ಸರಿದಾಗ ನಮಗಿಂತ ಗೊತ್ತ ಅಂತ ಒಳಗೊಳಗೆ ನಗುತ್ತಿದ್ದಾರೆ. ಆಕೆ ಕೂಡ ಇದೆಲ್ಲ ತಿಳಿದವರಂತೆ ಮುಜುಗರದಿಂದ ಒಂದು ಬದಿಯಲ್ಲೇ ನಿಂತು, ಮೊಬೈಲಿನ ಮಣೆ ಒತ್ತುತ್ತ, ಅತ್ತಿತ್ತ ನೋಡುತ್ತ ಹೊತ್ತು ಹೋಗುವುದನ್ನೇ ಕಾಯುತ್ತಿದ್ದಾರೆ. ಕತ್ತಲಾಗುತ್ತಾ ಬಂದು ಕರೆಂಟು ಬಂದು , ಹೋಗಿ ಈಗ ಮತ್ತೆ ಬಂದಿದೆ. ಆದರೂ ಕೆಲಸ ನಿಂತಿಲ್ಲ. ಕತ್ತಲಾಗುತ್ತಿದೆ. ಆಕೆ ಅಲ್ಲೇ ರಸ್ತೆ ಬದಿಯಲ್ಲಿ ಇರಿಸು-ಮುರಿಸು ಪಡುತ್ತಾ ನಿಂತಿದ್ದಾರೆ. ಇವರು ಕೆಲಸ ಮುಂದುವರಿಸಿದ್ದಾರೆ…. ಇದನ್ನೆಲ್ಲ ನಾನು ಆಗಾಗ್ಗೆ ಕಿಟಕಿಯಿಂದ, ಒಮ್ಮೊಮ್ಮೆ ಹೊರಗೆ ಬಂದು ನೋಡಿ ಹೋಗುತ್ತಿದ್ದೇನೆ….
ನನಗೆ ಯಾವ ಇಸಂ ಕೂಡ ಗೊತ್ತಿಲ್ಲ. ಅದ್ಯಾಕೋ ಇದನ್ನು ಬರೀಬೇಕು ಅನ್ನಿಸ್ತು. ಸುಮ್ಮನೆ ಬರೆದಿದ್ದೇನೆ, ಅಷ್ಟೆ…!
Add comment September 15, 2008
ಹೀಗೆ ಸುಮ್ಮನೆ ಒಂದು ಕವಿತೆ
ಸುಮ್ಮನೆ ಸುಖಕೊಡುವ ಏಕಾಂತ
ಬಿಚ್ಚಿಟ್ಟಷ್ಟು ಬೆಚ್ಚಗಾಗುವ ನೆನಪುಗಳು
ಮಾತಿಗೆ ಕೊನೆಯಿಲ್ಲ ಮೌನಕ್ಕೆ ಮಿಗಿಲಿಲ್ಲ
ಒಮ್ಮೆಮ್ಮೆ ಮೌನ ಮಾತಾಗಿ
ಮಾತು ಮೌನಕ್ಕೆ ತಿರುಗಿ
ಮತ್ತೇನೋ ಆಗಿ ಹೋಗಿ
ಇನ್ನು ಇಬ್ಬರು ಮಾತನಾಡಬಾರದು ಅಂತಂದು
ಎಲ್ಲ ಸರಿಹೋಗಿದೆ ಅಂದುಕೊಳ್ಳುವ ಹೊತ್ತಿಗೆ
ಇಲ್ಲ ಇನ್ನೊಂದಿದೆ ಎನ್ನುವಂತೆ
ಇಣುಕುತ್ತಿವೆ ನಿನ್ನ ನಿನ್ನ ಕಣ್ಣೊಳಗಿಂದ ಕನಸುಗಳು
1 comment September 4, 2008
ಪರೀಕ್ಷೆ ಹೊತ್ತಲ್ಲಿ ಒಂಟಿ ಹುಡುಗಿಯ ಧ್ಯಾನ
ಇವತ್ತು ಕತ್ತಲು ಕಳೆದು ಬೆಳಕು ಮೂಡಿ ನಾಳೆಯಾದರೆ ಎಂಎ ಪರೀಕ್ಷೆ. ಹಾಗಂತ ಒಬ್ಬರಮೇಲೊಬ್ಬರು ಮೆಸೇಜು ಮಾಡಿ ಎಚ್ಚರಿಸುತ್ತಿದ್ದಾರೆ! ನಾನಿನ್ನು ಪುಸ್ತಕದ ಧೂಳು ಕೆಡವಿ ಪುಟ ತೆರೆಯುವ ಸಾಹಸವನ್ನೂ ಕೈಗೊಂಡಿಲ್ಲ! ಯಾವತ್ತೂ ಅಷ್ಟೆ. ಈ ಪರೀಕ್ಷೆಗೆ ಓದೋದು ಅಂದ್ರೆ ನಂಗೆ ಎಲ್ಲಿಲ್ಲದ ಜಿಗುಪ್ಸೆ, ವೈರಾಗ್ಯ. ಪಠ್ಯ ಪುಸ್ತಕಗಳು ಅಂತಂದ್ರೆ ಒಂದ್ ರೀತಿ ಮುಜುಗರ. ಸಿಲಬಸ್ ಅನ್ನೋ ಒಂದೇ ಕಾರಣಕ್ಕೆ ಅದೆಷ್ಟೋ ಒಳ್ಳೊಳ್ಳೆ ಪುಸ್ತಕಗಳನ್ನೆಲ್ಲ ಓದದೇ ಹಾಗೇ ಮಡಿಸಿಟ್ಟಿದ್ದೀನಿ. ಡಿಗ್ರಿ ಎರಡನೇ ವರ್ಷದಲ್ಲಿದ್ದಾಗ ‘ಶಬ್ದಮಣಿದರ್ಪಣಂ’ ನನ್ನ ಸಿಲಬಸ್ಸಾಗಿತ್ತು. ಮೊದಲ ದಿನ ಕ್ಲಾಸಿಗೆ ಹೋಗಿದ್ದೇ ಕಡೆ. ಇನ್ಯಾವತ್ತೂ ಆ ಪಾಠ ಕೇಳಿಲ್ಲ. ದರ್ಪಣಂ ಮುಟ್ಲಿಲ್ಲ. ಕಡೆ ದಿನ ಜೆರಾಕ್ಸ್ ನೋಟ್ಸೇ ಗತಿಯಾಯ್ತು. ಇಂತಹದ್ದೊಂದು ಭಂಡಧೈರ್ಯ ಅದ್ಯಾಗೋ ನನಗೆ ಗೊತ್ತಿಲ್ಲದೆ ನನ್ನೊಳಗೆ ಸೇರಿಕೊಂಡಿದೆ.
ಈ ಅತಿಯಾದ ಆತ್ಮವಿಶ್ವಾಸ ಕೆಲವೊಮ್ಮೆ ಕೈ ಕೊಟ್ಟಿದ್ದೂ ಉಂಟು. ಐದನೇ ಸೆಮಿಸ್ಟಾರಿನಲ್ಲಿ ಹಿಂಗೇ ಆಯ್ತು. ‘ಭಾರತೀಯ ಕಾವ್ಯ ಮೀಮಾಂಸೆ’ ಯನ್ನ ಅರಗಿಸಿಕೊಳ್ಳಲಾರದೇ, ಬರೆದರಾಯಿತು ಅಂತನ್ನೋ ಅತೀ ವಿಶ್ವಾಸದೊಂದಿಗೆ ಪರೀಕ್ಷಾ ಹಾಲ್ ಗೆ ಹೋದೆ. ಪ್ರಶ್ನೆಪತ್ರಿಕೆ ನೋಡಿದ್ದೇ, ಕಣ್ಣು ಮಂಜಾಗಿ ತಲೆ ಸುತ್ತು ಬಂತು! ಇನ್ನೂ ಬರೆಯಲಾರೇ ಅನಿಸಿದ್ದೇ, ಮುಂದಿನ್ ಸೆಮ್ ನಲ್ಲಿ ಬರೆದರಾಯ್ತು ಅಂತಂದು , ಸಹಿ ಮಾಡಿದ ಖಾಲಿ ಉತ್ತರ ಪತ್ರಿಕೆ ನೀಡಿ ಹೊರಬಿದ್ದೆ. ರಿಸಲ್ಟ್ ದಿನ ನೋಡಿದ್ರೆ ಕನ್ನಡದಲ್ಲಿ ಪಾಸಾಗಿಬಿಟ್ಟಿದ್ದೆ (ಡಿಗ್ರಿ ಅಂತಿಮ ವರ್ಷದಲ್ಲಿ ನನ್ನಂತ ಸೋಮಾರಿಗಳು, ಪೆದ್ದರಿಗಾಗಿ ಒಂದು ಅನುಕೂಲ ಇದೆ. ಒಂದು ಐಚ್ಚಿಕ ವಿಷಯದಲ್ಲಿ ಮೂರು ಪತ್ರಿಕೆ ಇರುತ್ತೆ. ಒಟ್ಟಾರೆ ಗರಿಷ್ಟ ಅಂಕ ೩೦೦, ಯಾವ ಪತ್ರಿಕೆಯಲ್ಲಿ ಎಷ್ಟಾದರೂ ಅಂಕ ತೆಗೀರಿ ಬಿಡಿ. ಒಟ್ಟು ಮೂರರಿಂದ ೧೨೦ ಮಾರ್ಕ್ಸ್ ತೆಗಿದ್ರೆ ಸಾಕು. ನಂದು ಇಂಟರ್ನಲ್ಸ್ ಸೇರಿ ೧೯೫ ಮಾರ್ಕ್ಸ್ ಬಂತು!)
ನಿನ್ನೆ ಭಾನುವಾರ ಬೆಳಿಗ್ಗೆ ಒಂಭತ್ತಾದರೂ ಹಾಸಿಗೆಯಿಂದೇಳದೇ ನೆಮ್ಮದಿಯಿಂದಿದ್ದವನಿಗೆ ನಿದ್ರಾಭಂಗ ಮಾಡಿಸಲೆಂದೇ ಫೋನೊಂದು ಬಂದಿತ್ತು. ನನ್ನದೊಂದು ಬುಕ್ ಕಾಣ್ತಿಲ್ಲ, ನಿನ್ ಹತ್ರ ಇರೋ ಅದೇ ಸಿಲಬಸ್ ಬುಕ್ ನ ನಾಳೆ ತಕೊಂಡ್ ಬಾ, ಸಿಬಿಎಸ್ ಪಾಸ್ ಕೌಂಟರ್ ಹತ್ರ ಅಂತಂದು ಗೆಳೆಯ ಕಾಲ್ ಮಾಡಿದ್ದ. ಹೀಗಾಗಿ ಅನಿವಾರ್ಯವಾಗಿ ಪುಸ್ತಕ ಹುಡುಕೋ ಕಾರ್ಯ ಶುರುವಾಯ್ತು. ಹೀಗೆ ಹುಡುಕಲು ಶುರುಮಾಡಿದ್ದೇ ಮೊದಲು ಕೈಗೆ ಸಿಕ್ಕಿದ್ದು ಆಟೋಗ್ರಾಫ್ ಬುಕ್. ಅದನ್ನೆಲ್ಲ ಇಂಚಿಂಚು ಬಿಡದೇ ಓದಿ ಏನೋನೋ ನೆನಪಾಗಿ, ಸ್ವಲ್ಪ ಎಮೋಷನಲ್ ಆಗಿ, ಒಂದಿಬ್ಬರಿಗೆ ಕಾಲ್ ಮಾಡಿ ಸುಧಾರಿಸಿಕೊಳ್ಳೋ ಹೊತ್ತಿಗೆ ಒಂದೆರಡು ಗಂಟೆಗಳೇ ಬೇಕಾಯ್ತು. ಆಮೇಲೆ ನನ್ನ ಎಂಎ ಸಿಲಬಸ್ಸಿನ ಒಂದೊಂದೇ ಪುಸ್ತಕ ಕೈಗೆ ಸಿಗಲು ಶುರುವಾಯ್ತು. ಅಡ್ಮಿಷನ್ ಆಗಿ ಒಂದು ದೊಡ್ಡ ಗಂಟಿನ ಪುಸ್ತಕದ ಹೊರೆ ಪಡೆದಿದ್ದೆ ನೇರ ಮನೆಗೆ ತಂದು ಕಟ್ಟು ಬಿಚ್ಚಿ ಅಲ್ಲಲ್ಲಿ ಕೆಡವಿದ್ದೆ. ಆಮೇಲೆ ಹೀಗೊಂದು ಕಟ್ಟು ಇರೋದೆ ಮರೆತೋಯ್ತು. ಹಿಂಗೆ ಪುಸ್ತಕ ಹುಡುಕೋವಾಗ್ಲೆ ನಂಗೆ ಇನ್ನೊಂದು ಅಮೂಲ್ಯ ವಸ್ತು ಸಿಕ್ತು ಅದು ಅವಳ ಡೈರಿ!
ಈ ‘ಅವಳು’ ಅಂದ್ರೆ ಬೇರ್ಯಾರೂ ಅಲ್ಲ. ಅನ್ನಾ ಫ್ರಾಂಕ್. ಹಿಟ್ಲರನ ಕಾಲದಲ್ಲಿ ಬಲಿಯಾದ ಅದೆಷ್ಟೋ ಯಹೂದಿಗಳಲ್ಲಿ ಒಬ್ಬಳು. ಈಕೆ ತನ್ನ ಹದಿನಾಲ್ಕೊ- ಹದಿನೈದನೇ ವಯಸ್ಸಿನಲ್ಲಿ ಬರೆದುಕೊಂಡಿದ್ದ ಡೈರಿ ಅವಳು ಸತ್ತ ಅದೆಷ್ಟೋ ವರ್ಷಗಳ ಬಳಿಕ ಪ್ರಕಟ ಆಗಿ, ಜನಪ್ರಿಯ ಆಯ್ತು. ಆಗಷ್ಟೆ ಹರೆಯದ ಕಣ್ಣು ತೆರೆಯುತ್ತಿದ್ದ ಹೆಣ್ಣು ಮಗಳೊಬ್ಬಳು ಯುದ್ಧಾಕಾಂಕ್ಷಿ ಜರ್ಮನಿಯನ್ನು ತನ್ನ ಕಂಗಳಲ್ಲಿ ಕಂಡಬಗೆಯೇ ಭಿನ್ನ. ಈ ಡೈರಿಯದ್ದೊಂದು ಅಧ್ಯಾಯ ನಮಗೆ ಪಿಯುಸಿ ಯಲ್ಲಿ ಪಠ್ಯವಾಗಿತ್ತು. (ಹಾ! ಪಿಯುಸಿನಲ್ಲಿ ನಾನ್ ತಪ್ಪದೇ ಕ್ಲಾಸಿಗೆ ಹೋಗ್ತಿದ್ದೆ. ಅದಕ್ಕೆ ಬೇರೆ ಕಾರಣವೂ ಇತ್ತು ಬಿಡಿ). ಒಂದೆರಡು ವರ್ಷದ ಹಿಂದೆ ಗೆಳೆಯರೆಲ್ಲ ಒಟ್ಟಾಗಿ ಹರಟುತ್ತಿದ್ದಾಗ ನನಗೇಕೋ ಈಕೆಯ ನೆನಪಾಗಿ ಇವಳ ವಿಷಯ ಎತ್ತಿದ್ದೆ. ಆಮೇಲೆ ಮೊದಲನೇ ವರ್ಡ್ ವಾರ್, ಜರ್ಮನಿ, ಹಿಟರ್- ನಾಜಿ, ಯಹೂದಿಗಳ ನರಮೇಧ ಅಂತೆಲ್ಲ ಚರ್ಚೆಯಾಗಿ ಕಡೆಗೆ ಈ ಅನ್ನಾ ಫ್ರಾಂಕ್ ಳ ಡೈರಿ ಇಟ್ಟುಕೊಂಡೇ ಒಂದು ನಾಟಕ ಪ್ರಯೋಗ ಮಾಡಬೇಕು ಅನ್ನೋ ನಿರ್ಧಾರಕ್ಕೆ ಬಂದ್ವಿ. ಸ್ಕ್ರಿಪ್ಟ್ ಬರೆಯೋ ಕೆಲಸ ನನ್ನ ಹೆಗಲ ಮೇಲೆ ಬಿತ್ತು. ಹೀಗೆ ಬಂದಿದ್ದೇ ಒಂದ್ ದಿನ ಹತ್ತಿರದ ಬ್ರೌಸಿಂಗ್ ಸೆಂಟರಿಗೆ ನುಗ್ಗಿ, ಸತತ ಆರೂವರೆ ಗಂಟೆ ಕಾರ್ಯಚರಣೆ ನಡೆಸಿ, ಸಿಕ್ಕ ವಿಷಯಗಳು, ಒಂದಿಷ್ಟು ಫೋಟೊಗಳೆನ್ನೆಲ್ಲ ಪ್ರಿಂಟ್ ಔಟ್ ತೆಗೆಸಿ ಜೇಬು ಖಾಲಿಮಾಡಿಕೊಂಡು ಬಂದಿದ್ದೆ. ರಂಗಾಯಣದಲ್ಲಿ ಒಂದಿಷ್ಟು ಸಂಜೆ ಈ ಚರ್ಚೆಯ ನೆಪದಲ್ಲಿ ಟೀ ಕುಡಿಯುತ್ತಾ ಲೆಕ್ಕವಿಲ್ಲದಷ್ಟು ಭಜ್ಜಿ ತಿಂದಿದ್ವಿ. ನಾನೂ ಅದೇ ಉತ್ಸಾಹದಲ್ಲಿ ನಾಲ್ಕಾರು ಪುಟ ಬರೆದಿದ್ದೆ. ಆಮೇಲೆ ಕೆಲಸಕ್ಕೆ ಸೇರಿದ ಮೇಲೆ ನನ್ನ ಎಂದಿನ ಸೋಮಾರಿತನದಿಂದಾಗಿ ಹೆಚ್ಚೇನು ಬರೆಯಲಾಗಲಿಲ್ಲ.
ಈಗ ಪರೀಕ್ಷೆ ಹೊತ್ತಲ್ಲಿ ಆ ಪುಟಗಳೆಲ್ಲ ಒಂದೊಂದಾಗಿ ಸಿಕ್ಕಿ, ನೆನ್ನೆಯಲ್ಲಾ ಅದನ್ನ ಓದೋದ್ರಲ್ಲೇ ಕಾಲ ಕಳೆದದ್ದಾಯಿತು. ಅವಳ ಬಗ್ಗೆ ಶ್ರೀಘ್ರದಲ್ಲೇ ಒಂದು ನಾಟಕದ ಸ್ಕ್ರಿಪ್ಟ್ ಬರೆದುಕೊಡ್ತೀನಿ ಅಂತ ಮತ್ತೆ ಗೆಳೆಯರಿಗೆ ಭರವಸೆ ಕೊಟ್ಟದ್ದೂ ಆಯಿತು. ಈ ಸಲ ಆದ್ರೂ ಬರೀಬೇಕು ಅನ್ನೋ ದೂರದಾಸೆ ನನ್ನದು.
ಬೆಳಿಗ್ಗೆ ಮತ್ತೊಮ್ಮೆ ಎಲ್ಲ ಕೆದಕಿ ,ಬೆದಕಿ ಕೂಡಿ ಕಳೆದೂ ಲೆಕ್ಕ ಹಾಕಿದ್ರೆ ಇಪ್ಪತ್ತರಲ್ಲಿ ಹದಿನಾರು ಪುಸ್ತಕ ಮಾತ್ರ ಇವೆ. ಇನ್ನೂ ನಾಲ್ಕು ನಾಪತ್ತೆ. ಏನಾದ್ರೂ ಬರೆದರೆ ಆಯ್ತು ಅಂತ ಇನ್ನೊಮ್ಮೆ ಭಂಡ ಧೈರ್ಯದೊಂದಿಗೆ ನಾಳೆ ಪರೀಕ್ಷೆ ಬರೀಲಿಕ್ಕೆ ಹೊರಟಿದ್ದೇನೆ. ನೀವೂ ಯಾರಾದ್ರೂ ಕೆ ಎಸ್ ಒ ಯು ನಲ್ಲಿ ಎಂಎ ಪರೀಕ್ಷೆ (ಓನ್ಲಿ ಜರ್ನಲಿಸಂ) ಕಟ್ಟಿದ್ರೆ, ನಾಳೆ ಪರೀಕ್ಷೆ ಬರೀಲಿಕ್ಕೆ ಬರ್ತಿದ್ರೆ, ಅಪ್ಪಿ ತಪ್ಪಿ ನನ್ನ ಪಕ್ಕ ಏನಾದ್ರೂ ಕುತ್ಕೋಂಡ್ರೆ ಸ್ವಲ್ಪ ಹೆಲ್ಪ್ ಮಾಡಿ ಪ್ಲೀಸ್!
1 comment August 25, 2008




