ಬಹು ದಿನಗಳ ನಂತರ: ಒಂದು ಅನುವಾದದೊಂದಿಗೆ
ಸೆಪ್ಟೆಂಬರ್ 24, 2009 at 6:45 ಫೂರ್ವಾಹ್ನ 2 comments
ಅದೆಷ್ಟೋ ತಿಂಗಳುಗಳ ನಂತರ ಮತ್ತೆ ‘ಮುಗಿಲ ಕಂಪು’ ತುಂಬುತ್ತಿದೆ. ಈ ಬಾರಿ ಒಂದು ಅನುವಾದದೊಂದಿಗೆ.
ಇಂಗ್ಲೀಷಿನಲ್ಲಿ ಬರೆಯುತ್ತಿರುವ ಭಾರತೀಯ ಲೇಖಕರ ಪೈಕಿ ರಸ್ಕಿನ್ ಬಾಂಡ್ ಸಹ ಒಬ್ಬರು. ಆರು ದಶಕಗಳಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಬಾಂಡ್ , ನೂರಕ್ಕೂ ಹೆಚ್ಚು ಸಣ್ಣ ಕಥೆಗಳನ್ನ, ಕೆಲವು ಕಾದಂಬರಿಗಳನ್ನ , ಪ್ರಬಂಧಗಳನ್ನ, ಮಕ್ಕಳ ಪುಸ್ತಕಗಳನ್ನ ಬರೆದಿದ್ದಾರೆ.
- ರಸ್ಕಿನ್ ಬಾಂಡ್
ಅಂತೆಯೇ, ‘Delhi is not Far’ ಅನ್ನುವ ಕಾದಂಬರಿಯನ್ನ ಬಾಂಡ್ ಬರೆದದ್ದು ೬೦ರ ದಶಕದಲ್ಲಿ. ಡೆಹ್ರಾಡೂನ್ ನಿಂದ ದೆಹಲಿಗೆ ಬಂದ ಸಂದರ್ಭ. ರಾಜಧಾನಿಯಲ್ಲಿ ಬದುಕು ಕಂಡುಕೊಳ್ಳುವ ಕನಸು ಹೊತ್ತು ಬಂದಾಗ. ಕಾದಂಬರಿಯೊಳಗಣ ಕಥೆಯಾದರೂ ಇದಕ್ಕಿಂತ ಭಿನ್ನವಿಲ್ಲ. ಯುವಕನೊಬ್ಬ ತನ್ನ ಬರವಣಿಗೆಯ ಮೇಲೆ ಬದುಕು ಕಂಡುಕೊಳ್ಳುವ ಅವಕಾಶಕ್ಕಾಗಿ ದೆಹಲಿಗೆ ಹೊರಟುನಿಂತ ಕಥೆ.
ಕಾದಂಬರಿಯಲ್ಲಿನ ‘ಪೀಪಲ್ ನಗರ’ ಒಂದರ್ಥದಲ್ಲಿ ಆರ್.ಕೆ. ನಾರಾಯಣರ ‘ಮಾಲ್ಗುಡಿ’ ಯಂತೆ. ಯಾವ ಭೂಪಟದಲ್ಲೂ ಕಾಣದ ಊರು. ಆದರೆ ಇಂದಿಗೂ ಇಂತಹ ಸಾಕಷ್ಟು ಹಳ್ಳಿಗಳು ನಮ್ಮಲ್ಲಿವೆ. ಮತ್ತು ಇಲ್ಲಿನ ಪಾತ್ರಗಳೂ ನಮ್ಮೊಳಗಿವೆ.
ಅನುವಾದ ಪ್ರಾಜೆಕ್ಟೊಂದರ ಸಲುವಾಗಿ ಪುಸ್ತಕವೊಂದರ ಹುಡುಕಾಟದಲ್ಲಿದ್ದಾಗ ಸಿಕ್ಕಿದ್ದು ಈ ಕಾದಂಬರಿ. ಅದರ ಕೆಲವು ಅಧ್ಯಾಯಗಳು ನನ್ನೀ ಬ್ಲಾಗಿನಲ್ಲಿ ಕಾಣಿಸಿಕೊಳ್ಳಲಿವೆ.
******
೧.
ಭವಿಷ್ಯವನ್ನು ರೂಪಿಸಿಕೊಳ್ಳುವ ದಿಸೆಯಲ್ಲಿ ನನ್ನ ಪ್ರಯತ್ನಗಳು ಹಲವು ಮತ್ತು ಎಲ್ಲ ವಿಫಲವಾದವು. ಒಂದು ಸಲ, ಮೂರು ದಿನದ ಮಟ್ಟಿಗೆ ತರಕಾರಿ ಇಟ್ಟಿದ್ದೆ; ಟೀ ಅಂಗಡಿ ಹಾಕಿ ಬಂಡವಾಳ ಹೂಡಿದೆ; ಕಡೆಗೆ ಹಸ್ತ ನೋಡಿ ಭವಿಷ್ಯ ಹೇಳುವ ಪ್ರಯತ್ನ ಮಾಡಿದೆ. ಈ ಕಡೆಯ ಪ್ರಯತ್ನ ಮಾತ್ರ ಚೂರೂ ಯಶಸ್ವಿಯಾಗಲಿಲ್ಲ. ಹಾಗಂತ ನಾನು ಕೆಟ್ಟದಾಗಿ ಭವಿಷ್ಯ ಹೇಳುತ್ತಿದ್ದೆ ಅಂತ ಅಲ್ಲ-ಒಬ್ಬ ಗಂಡಸು ಅಥವಾ ಹೆಂಗಸು ಯಾವ ವಿಚಾರಗಳನ್ನ ಹೆಚ್ಚು ಕೇಳಲಿಕ್ಕೆ ಇಷ್ಟ ಪಡುತ್ತಾರೆ ಅಂತ ನನಗೂ ಗೊತ್ತಿತ್ತು. ಆದರೆ ಹೀಗೆ ಭವಿಷ್ಯ ಕೇಳುವವರ ಸಂಖ್ಯೆ ಮಾತ್ರ ಪೀಪಲ್ ನಗರದಲ್ಲಿ ಬಹಳ ಕಡಿಮೆ ಇತ್ತು. ನನ್ನ ಗೆಳೆಯರು ಮತ್ತು ನೆರೆಹೊರೆಯವರು ಈ ಭವಿಷ್ಯವನ್ನು ಮೀರಿದ ಹಂತಕ್ಕೆ ಬೆಳೆಯಲು ಇಷ್ಟ ಪಡುತ್ತಿದ್ದರು.
‘ಒಂದು ಮಗು ಹುಟ್ಟಿದಾಗ ಅದರ ಜಾತಕವನ್ನ ಬರೆಯುತ್ತಾರೆ ಅಲ್ಲವಾ?’ ಹಾಗಂತ ದೀಪ್ ಚಾಂದ್ ಕೇಳಿದ. ‘ಒಂದು ಸಣ್ಣ ಪತ್ರದಲ್ಲಿ ಅದರ ಇಡೀ ಭವಿಷ್ಯವನ್ನ ಬರೆಯಲಾಗುತ್ತೆ. ಹಾಗಂತ ನಿಜಕ್ಕೂ ಅದೇ ಆ ಮಗುವಿನ ಭವಿಷ್ಯವನ್ನ ನಿರ್ಧರಿಸುತ್ತ?’
ದೀಪ್ ಚಾಂದ್ ನ ಮಾತುಗಳು ನನಗೂ ನಿಜ ಅನಿಸಿದ್ದವು. ಆದರೆ ಭವಿಷ್ಯ ಹೇಳುವುದು ಹಣ ಸಂಪಾದನೆಯ ಸುಲಭ ಮಾರ್ಗಗಳಲ್ಲಿ ಒಂದು ಅನ್ನುವುದು ನನ್ನ ಯೋಚನೆ ಆಗಿತ್ತು. ಒಬ್ಬ ಅನಕ್ಷರಸ್ತ ಕೂಡ ಸಾಧುವಿನ ವೇಷ ಧರಿಸಿ ಬಿ.ಎ. ಬಿ.ಕಾಂ. ಪಧವೀಧರರಂತೆ ಮಾತಾಡಿ ಮೋಡಿ ಮಾಡುವಾಗ, ನಾನೇಕೆ ಆ ಪ್ರಯತ್ನ ಮಾಡಬಾರದು ಅನಿಸಿತ್ತು. ಒಂದು ವಿಷಯದ ಬಗ್ಗೆ ಪುಸ್ತಕವನ್ನ ಓದಿಕೊಳ್ಳುವುದು, ನನ್ನ ಮನೆಯ ಮುಂದೆ ಬೋರ್ಡೋದನ್ನ ನೇತುಹಾಕಿ ‘ನಾನು ಭವಿಷ್ಯ ಹೇಳ್ತೀನಿ’ ಅಂತ ತಿಳಿಸೋದಕ್ಕೆ ಹೆಚ್ಚು ಸಮಯ ಬೇಕಿರಲಿಲ್ಲ. ಆದಾಗ್ಯೂ, ನಾನು ಈ ಕೆಲಸದಲ್ಲಿ ಯಶಸ್ಸು ಕಾಣಲಿಲ್ಲ.ಏಕೆಂದರೆ, ನಾನು ಆಗಲೇ ಪೀಪಲ್ ನಗರದಲ್ಲಿ ಸಾಕಷ್ಟು ಜನರಿಗೆ ಪರಿಚಿತನಾಗಿದ್ದೆ. ಮೊಹಲ್ಲಾದ ಅರ್ಧಭಾಗ ಇದೊಂದು ಜೋಕು ಅಂತ ಭಾವಿಸಿದರೆ, ಇನ್ನರ್ಧ ಭಾಗಕ್ಕೆ ಬಹುಶಃ ನನ್ನ ಬುದ್ಧಿವಂತಿಕೆಯ ಮೇಲೆ ನಂಬಿಕೆಯೇ ಇರಲಿಲ್ಲ.
ತರಕಾರಿ ಮಳಿಗೆ ಇಟ್ಟ ಕಥೆ ಕೊಂಚ ಭಿನ್ನ. ರಸ್ತೆಯ ಇಳಿಜಾರಿನಲ್ಲಿ, ದೊಡ್ಡ ಗಡಿಯಾರದ ಹತ್ತಿರ ಒಬ್ಬ ವಿಧವೆ ಒಂದು ದಿನಸಿ ಅಂಗಡಿ ಇಟ್ಟುಕೊಂಡಿದ್ದಳು. ಅಕ್ಕಿ, ದವಸ ಧಾನ್ಯಗಳು ಎಲ್ಲವೂ ಅವಳ ಆ ಅಂಗಡಿಯಲ್ಲಿ ಸಿಗುತ್ತಿತ್ತು. ತರಕಾರಿ ಮತ್ತು ಮಾಂಸವನ್ನು ಹೊರತುಪಡಿಸಿ. ತರಕಾರಿ ವ್ಯಾಪಾರಕ್ಕೆ ಕೊಂಚ ಹೆಚ್ಚಿನ ಬಂಡವಾಳ, ಶ್ರಮ ಬೇಕಾಗುತ್ತೆ ಅನ್ನುವುದು ಅವಳ ವಾದ. ಮತ್ತು ಅದನ್ನ ಪ್ರಯತ್ನ ಕೂಡ ಮಾಡಬಯಸಿದ್ದ ಆಕೆ, ಆ ವ್ಯಾಪಾರಕ್ಕಾಗಿ ನನ್ನನ್ನ ಹಣ ತೊಡಗಿಸುವಂತೆ ಒತ್ತಾಯ ಪಡಿಸಿದ್ದಳು.
ಅದನ್ನ ನಿರಾಕರಿಸುವುದು ಕಷ್ಟ ಅನಿಸಿತ್ತು. ಆ ಬಲಿಷ್ಠ ಹೆಂಗಸು, ಆಕೆಯಿಂದ ಬೇರೆ ಏನನ್ನಾದರೂ ಪಡೆಯಲೆತ್ನಿಸುವ ಯಾವುದೇ ಗಂಡಸಿನ ವಿರುದ್ಧವೂ ಬೀದಿಯಲ್ಲೇ ಕಾಳಗ ಹೂಡಬಲ್ಲವಳಾಗಿದ್ದಳು. ಜಗಳ ಆಡುವುದರಲ್ಲಿ ಆಕೆ ಇಲ್ಲೆಲ್ಲ ಹೆಸರುವಾಸಿ. ಅಲ್ಲದೆ, ಒಳ್ಳೆಯ ವ್ಯಾಪಾರಿ ಕೂಡ ಆಗಿದ್ದ ಆಕೆ, ನನ್ನ ಸ್ವಂತ ಖರ್ಚಿನಲ್ಲಿ ತರಕಾರಿ ಮತ್ತು ಹಣ್ಣುಗಳ ಅಂಗಡಿಯನ್ನ ಇಡುವಂತೆ ಕೇಳಿದಳು.
ಅಂಗಡಿಯೇನೋ ಇಟ್ಟಾಯಿತು. ಆದರೆ, ಆರಂಭದಿಂದ ಕೊನೆವರೆಗೂ ಒಂದೇ ಒಂದು ಕೋಸನ್ನಾಗಲಿ, ಗೆಡ್ಡೆಯನ್ನಾಗಲಿ ಮಾರಲಿಕ್ಕೂ ಆಗಲಿಲ್ಲ. ತರಕಾರಿಗಳು ಕೊಳೆತುಹೋಗುವ ಮುನ್ನ ನಾನು ಅವುಗಳನ್ನ ದೀಪ್ ಚಾಂದ್, ಪೀತಾಂಬರ್ ಮತ್ತು ಇನ್ನುಳಿದ ನನ್ನ ಸ್ನೇಹಿತರಿಗೆ ನೀಡಿದೆ. ಕಿಲೋ ಒಂದಕ್ಕೆ ಎಲ್ಲರಿಗಿಂತ ಹತ್ತು ಪೈಸೆ ಬೆಲೆ ಜಾಸ್ತಿ ಇಟ್ಟು ಮಾರಾಟ ಮಾಡುವಂತೆ ಆಕೆ ನನಗೆ ನಿರ್ದೇಶನ ನೀಡಿದ್ದಳು. ಗುಣಮಟ್ಟಕ್ಕಿಂತ ವಸ್ತುವಿನ ಪ್ರಮಾಣಕ್ಕೆ ಹೆಚ್ಚು ಬೆಲೆ ಕೊಡುವ ಪೀಪಲ್ ನಗರದಲ್ಲಿ ಇದು ನಡೆಯಲಿಲ್ಲ, ಹತ್ತು ಪೈಸೆಗಳ ಹೆಚ್ಚುವರಿ ಬೆಲೆಗೆ ಬದಲಾಗಿ ಗಿರಾಕಿಗಳು ಸ್ವಚ್ಛವಾದ ಮತ್ತು ತಾಜಾ ತರಕಾರಿಗಳನ್ನು ಪಡೆಯುತ್ತಾರೆ ಎಂಬುದು ಆಕೆಯ ವಾದವಾಗಿತ್ತು. ಆದರೆ ಅವಳ ಅಂದಾಜು ತಪ್ಪಾಗಿತ್ತು. ಗಿರಾಕಿಗಳು ತಾಜಾ, ಹಸಿರಾದ ತರಕಾರಿಗಳ ಜೊತೆಗೇ ಅವು ಕಡಿಮೆ ಬೆಲೆ ಕೂಡ ಆಗಿರಬೇಕೆಂದು ಬಯಸುತ್ತಿದ್ದರು.
ಆದರೂ ಮೊದಲ ದಿನದ ಅನುಭವ ತುಂಬಾ ಕುತೂಹಲಕಾರಿಯಾಗಿತ್ತು. ಬೆಳಿಗ್ಗೆ ಐದಕ್ಕೆ ಎದ್ದು (ವರ್ಷಗಳ ಹಿಂದಿನಿಂದಲೂ ನಾನು ಹೀಗೆ ಎದ್ದಿರಲಿಲ್ಲ) ರೈಲ್ವೆ ಸ್ಟೇಷನ್ನಿನ ಹತ್ತಿರವಿರೋ ತರಕಾರಿ ಮಾರುಕಟ್ಟೆಯಲ್ಲಿ ನಡೆದು, ಸಗಟು ವ್ಯಾಪಾರಿಗಳ ಜೊತೆ ಚೌಕಾಸಿಗಿಳಿದು ಕೊಂಡ ತರಕಾರಿಗಳನ್ನೆಲ್ಲ ಚೀಲಕ್ಕೆ ತುಂಬಿಕೊಂಡು , ಕೂಲಿ ಆಳಿನೊಂದಿಗೆ ಆ ಇಬ್ಬನಿ ಹೊತ್ತ ತಣ್ಣನೆಯ ಹವೆಯಲ್ಲಿ ಮತ್ತೆ ಬಜಾರಿನತ್ತ ನಡೆದು ಬರುವುದು ಆನಂದದಾಯಕವಾಗಿತ್ತು.
ಬಸ್ ಸ್ಟಾಪಿನಿಂದ ಕೇವಲ ಅರ್ಧ ಮೈಲು ದೂರವಿರೋ ರೈಲು ನಿಲ್ದಾಣ ನನ್ನನ್ನ ಯಾವಾಗಲೂ ಆಕರ್ಷಿಸುತ್ತದೆ. ನಾನು ಹುಡುಗನಾಗಿದ್ದಾಗ ಎಲ್ಲ ಮಕ್ಕಳಂತೆ ರೈಲುಗಳನ್ನ ನೋಡುತ್ತಲೇ ವಿಸ್ಮಯಗೊಳ್ಳುತ್ತಿದ್ದೆ. ರೈಲುಗಳು ಹೊಗೆ ಉಗುಳುತ್ತಾ ಮೈದಾನದಿಂದ ಹೊರಟಾಗ , ಅದರಲ್ಲಿನ ಜನರತ್ತ ಕಣ್ಣು ಮಿಟುಕಿಸದೇ ನೋಡುತ್ತಿದ್ದೆ. ಯಾರೊಬ್ಬರಾದರೂ ನನ್ನತ್ತ ನೋಡಿದರೂ ಪುಳಕಿತನಾಗುತ್ತಿದ್ದೆ. ಆ ಬೋಗಿಗಳಲ್ಲಿನ ಜನರೆಲ್ಲ ಎಲ್ಲಿಗೆ ಹೋಗುತ್ತಿದ್ದಾರೆ ಅಂತೆಲ್ಲ ಯೋಚಿಸುತ್ತಾ ಚಕಿತನಾಗುತ್ತಿದ್ದೆ. ರೈಲುಗಳು ಹೊಸತೊಂದು ರೋಂಮಾಂಚನ ಕೊಡುವ, ಇನ್ನೊಂದು ಲೋಕಕ್ಕೆ ಹೋಗಿಬರುವ ಸರಕುಗಳೇ ಆಗಿದ್ದವು, ನವಾಬ್ಗುಂಜ್ ಅವಘಡ ನನ್ನ ಪೋಷಕರನ್ನ ಬಲಿ ತೆಗೆದುಕೊಳ್ಳುವ ತನಕ.
ಅಲ್ಲಿಗೆ ರೈಲು ಮತ್ತು ನನ್ನ ನಡುವಿನ ರೋಮಾಂಚಕ ಅಧ್ಯಾಯಕ್ಕೆ ತೆರೆ ಬಿದ್ದಿತ್ತು.
‘ಮುಂದೆ ಏನು ಮಾಡಬೇಕು ಅಂದುಕೊಂಡಿದ್ದೀಯಾ?’ ದೀಪ್ ಚಾಂದ್ ನನ್ನ ಗಡ್ಡಕ್ಕೆ ಸೋಪು ಹಚ್ಚುತ್ತಲೇ ಕೇಳಿದ. (ನಾನೇಕೆ ಸ್ವತಃ ಗಡ್ಡ ಬೋಳಿಸಿಕೊಳ್ಳುವುದಿಲ್ಲ ಅನ್ನುವುದಕ್ಕೆ ಕಾರಣಗಳು ಹಲವು; ನನ್ನ ಆಲಸ್ಯ, ಸೋಮಾರಿತನ ಇನ್ನೂ ಮುಂತಾಗಿ. ನಿಜ ಎಂದರೆ ದೀಪ್ ಚಾಂದ್ ತನ್ನ ಕತ್ತಿಯನ್ನೇ ಕುಂಚದಂತೆ ಉಪಯೋಗಿಸುವುದು ನನಗೆ ಇಷ್ಟವಾಗಿಹೋಗಿತ್ತು)
‘ ನೀನೇಕೆ ಒಂದೊಳ್ಳೆ ಹುಡುಗಿಯನ್ನ ನೋಡಿ ಮದುವೆ ಆಗಬಾರದು. ಅದು ನಿನ್ನೆಲ್ಲ ಸಮಸ್ಯೆಗಳನ್ನ ಬಗೆಹರಿಸುತ್ತದೆ. ಒಬ್ಬಳು ಹೆಣ್ಣು ತರುಣನೊಬ್ಬನ ಲೈಂಗಿಕ ಅಗತ್ಯಗಳನ್ನ ಪೂರೈಸಿ, ಆತನನ್ನು ಖುಷಿಯಾಗಿ ನೋಡಿಕೊಳ್ಳಬಲ್ಲಳು. ನೀನು ತುಂಬಾ ಮಗ್ನನಾಗಿ ಬರೆಯುತ್ತಿರುವಾಗ, ಆಕೆ ತನ್ನ ಸೆರೆಗಿನಿಂದ ನಿನಗೆ ಗಾಳಿ ಬೀಸುತ್ತ, ಕಾಲುಗಳನ್ನ ಒತ್ತುತ್ತ ನಿನ್ನ ಸೇವೆಯನ್ನ ಮಾಡಬಲ್ಲಳು ಕೂಡ.’
‘ಇದು ಅಂತ ಕೆಟ್ಟ ಉಪಾಯವೇನಲ್ಲ.’ ನಾನಂದೆ. ‘ಆದರೆ ಅಂತಹ ಹುಡುಗಿಯನ್ನು ಎಲ್ಲಿ ಹುಡುಕುವುದು. ಸೇಠ್ ಗೋವಿಂದರಾಮ್ ನಿಗೆ ಒಬ್ಬಳು ಸುಂದರವಾದ ಹೆಂಡತಿ ಇದ್ದಾಳಂತೆ. ಆದರೆ ಆಕೆ ಎಂದೂ ನನ್ನ ಕಣ್ಣಿಗೆ ಬಿದ್ದಿಲ್ಲ. ಮತ್ತೆ ಆ ಸೇಠು ಸದ್ಯಕ್ಕೆ ಸಾಯೋ ಹಾಗೂ ಕಾಣಿಸ್ತಾ ಇಲ್ಲ.’
‘ನಿನಗಾಗಿ ಅವಳೇನು ವಿಧವೆ ಆಗಬೇಕಿಲ್ಲ. ಒಬ್ಬ ಬೊಜ್ಜುಹೊಟ್ಟೆಯ ಲಕ್ಷಾಧಿಪತಿಯನ್ನ ಮದುವೆಯಾಗಿರೋ ತರುಣಿಯನ್ನ ಹುಡುಕಿಕೋ ಸಾಕು. ಅವಳೇ ನಿನಗೆ ಸಹಕರಿಸುತ್ತಾಳೆ’ ದೀಪ್ ಚಾಂದ್ ಮದುವೆಯಾಗಿ, ಎರಡೂ ಮಕ್ಕಳನ್ನೂ ಹೊಂದಿರುವ ಗಂಡಸು. ನಾನಿದನ್ನು ಏಣಿಸಿಯೇ ಇರಲಿಲ್ಲ.
*****
ದೀಪ್ ಚಾಂದ್ ನ ಮಕ್ಕಳು ಸೇರಿದಂತೆ, ಪೀಪಲ್ ನಗರದಲ್ಲಿನ ಒಟ್ಟು ಮಕ್ಕಳ ಸಂಖ್ಯೆ ಇಲ್ಲಿನ ವಯಸ್ಕರ ಐದನೇ ಒಂದು ಭಾಗದಷ್ಟಿರುವುದು ಮೆಚ್ಚುಗೆಯ ವಿಷಯ. ಜನಗಣತಿಯ ಪ್ರಕಾರ ದೇಶದ ಜನಸಂಖ್ಯೆಯಲ್ಲಿನ ನಾಲ್ಕನೇ ಒಂದು ಭಾಗ, ಐದರಿಂದ ಹದಿನೈದರ ವಯೋಮಿತಿ ಒಳಗಿನವರಂತೆ. ಬೀದಿಗಳಲ್ಲಿ ನೆಗೆಯುತ್ತಾ, ಕುಣಿಯುತ್ತಾ ಆಡುವ, ಅಳುವ, ಕಿಲಕಿಲನೇ ನಗುವ ಮಕ್ಕಳು ಮುಂದೇ ತಮ್ಮ ಹುಟ್ಟಿನೊಂದಿಗೆ ಸ್ಪರ್ಧೆಗೆ ಬಿದ್ದಂತೆ ಆಡುತ್ತಾರೆ.
ನನ್ನ ಕೋಣೆಯ ಅಕ್ಕಪಕ್ಕದಲ್ಲಿ ಸಾಕಷ್ಟು ಕುಟುಂಬಗಳು ವಾಸಿಸುತ್ತಿವೆ. ಪ್ರತಿ ಮನೆಯಲ್ಲೂ ಡಜನ್ ಗಟ್ಟಲೆ ಜನರಿದ್ದಾರೆ. ಪ್ರತಿದಿನ ಕುಟುಂಬವೂ ನನ್ನ ಕೋಣೆಗಿಂತ ಕೊಂಚ ದೊಡ್ಡದಾದ ಕೋಣೆಯಲ್ಲೇ ವಾಸಿಸುತ್ತದೆ. ಅಡಿಗೆಗೆ, ಊಟಕ್ಕೆ, ಮಲಗಲಿಕ್ಕೆ, ಪ್ರೇಮ,ಕಾಮಕ್ಕೆ ಎಲ್ಲದಕ್ಕೂ ಅದೇ ಜಾಗ. ಮನೆಯ ಗಂಡಸರು ಹತ್ತಿರದ ಸಕ್ಕರೆ ಕಾರ್ಖಾನೆಯೊಂದರಲ್ಲಿ ದುಡಿಯುತ್ತಾ ತಿಂಗಳಿಗೆ ಐವತ್ತು ರೂಪಾಯಿಗಳಷ್ಟು ಸಂಬಳ ಸಂಪಾದಿಸುತ್ತಾರೆ. ಪೀಪಲ್ ನಗರದ ಹೈಸ್ಕೂಲಿನಲ್ಲಿ ಓದುತ್ತಿರುವ ಈ ಮನೆಗಳ ಹಿರಿಮಕ್ಕಳು ಊಟಕ್ಕಷ್ಟೇ ಇಲ್ಲಿ ಬಂದು ಹೋಗುತ್ತಾರೆ. ಚಿಕ್ಕವರು ತಮ್ಮ ಜೇಬುಗಳಲ್ಲಿ ಕಲ್ಲುಗಳನ್ನ, ಸಣ್ಣ ನಾಣ್ಯಗಳನ್ನ ತುಂಬಿಕೊಂಡು ಇಡೀ ದಿನವೆಲ್ಲ ಆಟದಲ್ಲೇ ತೊಡಗುತ್ತಾರೆ. ಟ್ಯಾಗೋರ್ ಬರೆಯುತ್ತಾರೆ ‘ದೇವರು ಇನ್ನೂ ಮನುಷ್ಯನ ಮೇಲೆ ನಿರಾಸಕ್ತಿ ತಾಳಿಲ್ಲ ಅನ್ನುವ ಸಂದೇಶ ಗೊತ್ತು ಪ್ರತಿ ಮಗುವೂ ಹುಟ್ಟಿ ಬರುತ್ತದೆ. ’
ಮಧ್ಯಾಹ್ನ ಬಿಸಿಲು ರಸ್ತೆಯನ್ನ ಬಿಟ್ಟು ಹೊರಟ ಮೇಲೆ, ಒಂದಿಷ್ಟು ಮಕ್ಕಳ ಗುಂಪು ಈ ನಿರ್ಜನ , ನಿಶಬ್ದವಾದ ಬೀದಿಗಳಿಗೆ ದಾಂಗುಡಿ ಇಡುತ್ತಾರೆ. ಬೆಳಿಗ್ಗೆಯಿಂದಲೂ ಆ ಮಕ್ಕಳು ಶಾಲೆಯ ಮೇಜುಗಳ ಮೇಲೆ ಕೂತಿರುತ್ತವೆ. ಈಗ ಸೂರ್ಯ ತಣ್ಣಗಾಗತೊಡಗಿದ ಮೇಲೆ ,ಮರಗಳಡಿ ಮಲಗಿರುವ ತಮ್ಮ ಹಿರಿಕರ ಉಸ್ತುವಾರಿಯಲ್ಲಿ ಆಟವಾಡುತ್ತಾರೆ.
ನದಿ ತೀರದ ಮರಳ ಮೇಲೆ ಮಕ್ಕಳು ಕಪ್ಪೆಯಾಟವಾಡುತ್ತಾರೆ. ದೊಡ್ಡ ಬಿಲ್ಡಿಂಗುಗಳ ನಡುವಿನ ಗಲ್ಲಿಗಳಲ್ಲಿ ಚಿನ್ನಿ ಕೋಲಿನಾಟ ನಡೆಯುತ್ತದೆ. ವಿಶಾಲವಾದ ಮೈದಾನಗಳಲ್ಲಿ ಮಕ್ಕಳು ,ಯುವಕರೂ ಇಬ್ಬರೂ ಕಬಡ್ಡಿ ಆಟವಾಡುತ್ತಾರೆ. ಇದೊಂದು ಗ್ರಾಮೀಣ ಪ್ರದೇಶದ ಆಟ. ಉಸಿರನ್ನ ಬಿಗಿ ಹಿಡಿದು, ತಮ್ಮ ಶಕ್ತಿಯನ್ನ ಉಪಯೋಗಿಸಿ ಎದುರಾಳಿಯನ್ನು ಮಣಿಸುವ ತಂತ್ರ.
ಇತ್ತೀಚೆಗಷ್ಟೇ ,ಇಲ್ಲೇ ಹತ್ತಿರದ ಹಳ್ಳಿಯೊಂದರಿಂದ ಇಲ್ಲಿಗೆ ವಲಸೆ ಬಂದ ಪೀತಾಂಬರ ಒಳ್ಳೆಯ ಯುವ ಕುಸ್ತಿಪಟು. ಅವನಿಗೆ ಎಲ್ಲ ಥರನಾದ ಪಟ್ಟುಗಳೂ ಗೊತ್ತು. ಅದರಲ್ಲೂ ಎದುರಾಳಿಯನ್ನು ಹಿಡಿದಿಡುವ ತಂತ್ರವನ್ನು ಆತ ಕರಗತ ಮಾಡಿಕೊಂಡಿದ್ದಾನೆ. ಆತ ಒಂದು ಬಾರಿ ನನ್ನನ್ನ ಅವನೂರಿಗೆ ಕರೆದೊಯ್ದಿದ್ದ. ಅಲ್ಲಿನ ಎಲ್ಲ ಹುಡುಗರೂ ಎತ್ತರದ, ಕೆಂಪಗಿನ ಬಣ್ಣದವರು. ಆರಾಮವಾಗಿ ಆಡುತ್ತಿದ್ದರು. ಈ ಧೃಡತೆ ಮತ್ತು ವಿಶ್ವಾಸದ ಹುಡುಗರನ್ನ ನಾನು ಪೀಪಲ್ ನಗರದಲ್ಲಿ ಕಂಡಿಲ್ಲ.
ಪೀಪಲ್ ನಗರ ಒಂದರ್ಥದಲ್ಲಿ ಕಲ್ಪನೆಗಳಿಗೂ ನಿಲುಕದ ಪಟ್ಟಣ. ಈ ಊರು ಕೆಲವೊಮ್ಮೆ ನನಗೆ ತೀರ ಬೋರು ಹೊಡೆಸಿದ್ದು ಉಂಟು.
‘ಇಷ್ಟು ಸುಂದರ ಜಗತ್ತೇ ಆತನ ಕಣ್ಮುಂದೆ ಇರುವಾಗ ದೇವರು ಮನುಷ್ಯನನ್ನು ಸೃಷ್ಟಿಸುವ ಪ್ರಯತ್ನವನ್ನೇಕೆ ಮಾಡಿದ’ ಒಂದು ಬೇಸಿಗೆಯ ರಾತ್ರಿ ಸೂರಜ್ ನನ್ನ ಕೇಳಿದೆ. ‘ಅದನ್ನೆಲ್ಲ ಇನ್ನೊಬ್ಬರ ಜೊತೆ ಹಂಚಿಕೊಳ್ಳುವ ಅಗತ್ಯತೆ ಆತನಿಗೇಕೆ ಬಿತ್ತು?’
“ಬಹುಶಃ ಆತನಿಗೆ ಒಂಟಿತನ ಕಾಡಿದ್ದಿರಬಹುದು” ಎಂದಿದ್ದ ಸೂರಜ್.
(ಮುಂದುವರಿಯುವುದು)
Entry filed under: ಕಥೆ-ಕವಿತೆ.
2 ಟಿಪ್ಪಣಿಗಳು Add your own
ನಿಮ್ಮದೊಂದು ಉತ್ತರ
Trackback this post | Subscribe to the comments via RSS Feed
1.
ಶೆಟ್ಟರು (Shettaru) | ಸೆಪ್ಟೆಂಬರ್ 24, 2009 ರಲ್ಲಿ 7:14 ಫೂರ್ವಾಹ್ನ
ಮುಂದುವರೆಸಿ, ಚೆನ್ನಾಗಿದೆ
-ಶೆಟ್ಟರು
2.
jomon | ಸೆಪ್ಟೆಂಬರ್ 29, 2009 ರಲ್ಲಿ 5:48 ಅಪರಾಹ್ನ
ಅನುವಾದ ಚೆನ್ನಾಗಿದೆ. ಕಥೆ ಮುಂದುವರೆಸಿ…