Archive for ಆಗಷ್ಟ್, 2013

ವರ್ಷದ ಮೇಲೊಂದು ಬರಹ…..

Imageಕಳೆದ ಹದಿನೈದು ದಿನಗಳಿಂದ ಹುಬ್ಬಳ್ಳಿಯಲ್ಲಿ ಮಳೆ ಬಿಟ್ಟೂಬಿಡದೇ ಸುರಿಯುತ್ತಿದೆ. ಮಳೆ ಎಂದರೆ ಖುಷಿ ಪಡುವವರೂ ಸಾಕೆನಿಸುವಷ್ಟು ಮಳೆ. ರಾತ್ರಿ ಕೆಲಸ ಮುಗಿಸಿ ಕಚೇರಿಯಿಂದ ಹೊರಬಿದ್ದು ವರುಣ ಸಿಂಚನವನ್ನು ಮೈತುಂಬಿಸಿಕೊಂಡು ನೆನೆಯುವ ಸುಖ ಅನುಭವಿಸುತ್ತಾ ಮನೆ ಸೇರುವ ಹೊತ್ತಿಗೆ, ಅದೆಷ್ಟೋತ್ತಿಗೆ ರಗ್ಗಿನ ಒಳಗೆ ಸೇರಿಕೊಳ್ಳುತ್ತೇನೋ ಅನಿಸಿಬಿಟ್ಟಿರುತ್ತದೆ.
ಇಂತಹದ್ದೇ ಒಂದು ಮಳೆಗಾಲಕ್ಕೆ ಮುನ್ನ ಈ ಬ್ಲಾಗ್ ಅಪ್ಡೇಟ್ ಮಾಡಿದ್ದು ಬಿಟ್ಟರೆ ಇತ್ತ ತಲೆ ಹಾಕಿರಲಿಲ್ಲ. ಈಗ ಬಂದು ನೋಡಿದರೆ ಎಲ್ಲವೂ ಹೊಸತು. ನಾನೇ ಬರೆದಿದ್ದಾ ಅನ್ನುವ ಸಂದೇಹ. ಮೊನ್ನೆ ‘ಕೆಂಡಸಂಪಿಗೆ’ ನೋಡುವಾಗಲೂ ಹೀಗೆ ಆಯಿತು. ವರ್ಷಗಳ ಮೇಲೆ ಸಂಪಿಗೆ ವನ ಹೊಕ್ಕು ಅಘ್ರಾಣಿಸಿದರೆ ಅದೇ ಘಮ! ವೆಬ್ ತಾಣದ ವಿಷಯ, ಬಣ್ಣ, ವಿಷಯ ಎಲ್ಲವೂ ಹಾಗೆಯೇ ಇದೆ, ಫ್ರೋಫೈಲ್ ಪಟ್ಟಿಯಲ್ಲಿರುವ ನನ್ನ ವಿವರಗಳೂ! ಅದರಂತೆ ನಾನಿನ್ನೂ ಕೆಂಡಸಂಪಿಗೆಯ ವರದಿಗಾರ. ಸುಮ್ಮನೆ ಹಳೆಯ ಲೇಖನಗಳನ್ನೆಲ್ಲ ಓದುತ್ತಾ ಕೂತೆ. ವೆಬ್ ಸೈಟಿನಲ್ಲಿ ಕೆಲಸ ಮಾಡುವ ದಿನಗಳಲ್ಲಿ ಹೆಚ್ಚು ಮನೋರಂಜನೆ ಖು಼ಷಿ ಕೊಟ್ಟಿದ್ದು ಜೋಗಿ ಅಂಕಣಗಳು. ಅದರಲ್ಲೂ ಜೋಗಿ ಭೈರಪ್ಪನವರ ಬಗ್ಗೆ ಬರೆದ ಲೇಖನಕ್ಕೆ ಎಷ್ಟೆಲ್ಲ ಕಮೆಂಟು, ಚರ್ಚೆ. ‘ನಮ್ಮಪ್ಪನ್ನ ಬೇಕಿದ್ದರೆ ಬಯ್ಯಿ. ಆದ್ರೆ ಭೈರಪ್ಪನವರನ್ನ ಮಾತ್ರ…’ ಅಂದೆಲ್ಲ ಓದುಗರು ಬಯ್ದರು ಅಂತ ಜೋಗಿ ಬರೆದುಕೊಂಡದ್ದು ನೆನಪಿಸಿಕೊಂಡು ನಗು ಬಂತು.
ಇಂತಹ ಒಂದಿಷ್ಟು ಚರ್ಚೆಗಳೂ, ಅವರಿವರ ಪರ-ವಿರೋಧ ವಾದಗಳು ಕನ್ನಡ ಅಂತರ್ಜಾಲ ತಾಣಗಳಲ್ಲಿ ನಡೆಯುತ್ತಾ ಇವೆಯಾದರೂ ಅವು ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ ಎನ್ನುವುದು ನನ್ನ ಅನಿಸಿಕೆ. ಆರು ಕೋಟಿ ಕನ್ನಡಿಗರ ಪೈಕಿ ಸಾಕಷ್ಟು ಮಂದಿ ಈಗೀಗ ಬ್ಲಾಗ್ ಆರಂಭಿಸುತ್ತಿದ್ದಾರೆ. ಹೊಸ ಹೊಸ ಬ್ಲಾಗ್ ಗಳೂ ಹುಟ್ಟಿಕೊಳ್ಳುತ್ತಿವೆ. ಆದರೆ ಹೀಗೆ ಹುಟ್ಟುವ ಬ್ಲಾಗ್ ಗಳಿಗಿಂತ ಸಾಯುತ್ತಿರುವ ಬ್ಲಾಗ್ ಗಳ ಸಂಖ್ಯೆಯೇ ಹೆಚ್ಚಿರಬಹುದು. ನಿರಂತರ ಬರೆಯುವ ಬ್ಲಾಗಿಗಳ ಸಂಖ್ಯೆ ಎಷ್ಟು ಎಂಬುದು ಅಗೋಚರ. ವೆಬ್ ತಾಣಗಳ ಸ್ಠಿತಿ ಇದಕ್ಕಿಂತ ಭಿನ್ನ ಏನಿಲ್ಲ. ‘ಸಂಪದ’ ಕಳೆದ ದಶಕದಲ್ಲಿ ಹೊಸ ಪಯತ್ನಗಳ ಮೂಲಕ ಸಾಕಷ್ಟು ಮಂದಿಯನ್ನು ಬ್ಲಾಗ್ ಲೋಕಕ್ಕೆ ಕರೆತಂದಿತ್ತು. ಮತ್ತೆ ಅಂತಹ ಪಯತ್ನಗಳು ನಡೆದಿಲ್ಲ. ಸಂಪದ ಸಹ ಹಿಂದಿನಷ್ಟು ಕ್ರಿಯಾಶೀಲವಾಗಿಲ್ಲ ಎಂದೆನಿಸುತ್ತದೆ. ಕೆಂಡಸಂಪಿಗೆಯಲ್ಲಿ ಒಂಥರ ಏಕತಾನತೆ ಹೆಚ್ಚು. ಅದು ಆರಂಭವಾದಾಗಿನಿಂದ ಬರೆಯುತ್ತಿರುವ ಲೇಖಕರೇ ಈಗಲೂ ಹೆಚ್ಚಾಗಿ ಬರೆಯುತ್ತಿದ್ದಾರೆ. ಹೆಚ್ಚಿನ ಕಮೆಂಟುದಾರರೂ ಹಳಬರೇ ಆಗಿದ್ದಾರೆ. ಅನಾಮಧೇಯ ಕಮೆಂಟುದಾರರ ಬೈಗುಳ, ಕಿರುಕುಳ ತಪ್ಪಿಲ್ಲ. ಒಂಥರ ಸಿದ್ಡ ಮಾದರಿಯ ಪತ್ರಿಕೆ ಎಂಬಂತಾಗಿದೆ.
ವರ್ಷಗಳ ಹಿಂದೆ ಬ್ಲಾಗ್ ಆಗಿದ್ದ ಅವಧಿ ಈಗ ವೆಬ್ ತಾಣವಾಗಿದೆ. ಒಂದಿಷ್ಟು ಹೊಸ ಪ್ರಯತ್ನಗಳು ನಡೆಯುತ್ತವೆಯಾದರೂ ಗಿಮಿಕ್ ಗಳೇ ಹೆಚ್ಚು ಎನಿಸುತ್ತದೆ.
ಸುಮಾರು ಹದಿನೈದು ದಿನದ ಹಿಂದೆ ಹುಬ್ಬಳ್ಳಿಯಲ್ಲಿ ನಡೆದ ಕನ್ನಡ ವಿಕಿಪೀಡಿಯಾ ಕಾರ್ಯಾಗಾರಕ್ಕೆ ಹೋಗಿದ್ದೆ. ಅಲ್ಲಿ ಯು.ಬಿ. ಪವನಜ ಹೇಳುತ್ತಿದ್ದರು. ‘ಕನ್ನಡದಲ್ಲಿ ವಿಕಿಪೀಡಿಯಾ ೨೦೦೩ರ ಜುಲೈನಲ್ಲಿ ಆರಂಭಗೊಂಡರೂ ಈವರೆಗೆ ಬರೆದದ್ದು ೧೪ ಸಾವಿರ ಲೇಖನ ಮಾತ್ರ. ಅವುಗಳಲ್ಲಿ ಬಹಳಷ್ಟು ಅಪೂರ್ಣ. ಕನ್ನಡ ವಿಕಿಪೀಡಿಯಾಕ್ಕೆ ೩೦೦ಕ್ಕೂ ಹೆಚ್ಚು ಸಂಪಾದಕರು ಇರುವರಾದರೂ ಸಕ್ರಿಯರು ೨೫ ಮಂದಿ. ಅವರಲ್ಲಿ ಅತಿ ಸಕ್ರಿಯರು ಐವರು ಮಾತ್ರ!’

ಆಗಷ್ಟ್ 2, 2013 at 9:09 ಫೂರ್ವಾಹ್ನ ನಿಮ್ಮ ಟಿಪ್ಪಣಿ ಬರೆಯಿರಿ


ಕಾಲಮಾನ

ಆಗಷ್ಟ್ 2013
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
 1234
567891011
12131415161718
19202122232425
262728293031  

ಮುಗಿಲು ಮುಟ್ಟಿದವರು

  • 9,307 hits

ಪಕ್ಷಿ ನೋಟ

Feeds