Posts filed under ‘ಸುಮ್ಮನೆ ಸುತ್ತಿದ್ದು’

ಆಲಿಕಲ್ಲು ಮಳೆಯೂ, ಸಾತೊಡ್ಡಿ ಜಲಪಾತವೂ


ಇವತ್ತು ಸಂಜೆ ಹುಬ್ಬಳ್ಳಿಯಲ್ಲಿ ಆಲಿಕಲ್ಲು ಮಳೆ ಸುರಿಯಿತು. ಚಹಾಗೆಂದು ಆಫೀಸಿನಿಂದ ಹೊರಗಡೆ ಕಾಲಿಟ್ಟಾಗ ಆಕಾಶದಲ್ಲಿ ಒಂದಿಷ್ಟು ಮೋಡವಿತ್ತು. ಈ ಬಿರು ಬಿಸಿಲಿನಲ್ಲಿ ಮಳೆ ಬರುವುದುಂಟೆ ಎಂದು ಅನುಮಾನದಿಂದ ರಸ್ತೆಗೆ ಕಾಲಿಟ್ಟರೆ ಮಳೆ ನಮ್ಮ ನೆತ್ತಿ ಮೇಲೆ ನಗುತ್ತ ಮುತ್ತಿನ ಹನಿಗಳನ್ನು ಉದುರಿಸತೊಡಗಿತು. ನೋಡುತ್ತಿದ್ದಂತೆಯೇ ರಸ್ತೆ ತುಂಬ ಮಂಜುಗಡ್ಡೆಯ ಬಿಂದುಗಳು ರಪ್ಪನೆ ಅಪ್ಪಳಿಸತೊಡಗಿದ್ದವು. ಒಂದಿಷ್ಟು ಕ್ಷಣ ನಾವು ಎಲ್ಲವನ್ನೂ ಮರೆತು ಮಕ್ಕಳಾದೆವು. ಕಾಲಿನ ಬಳಿಗೆ ಬಂದು ಬಿದ್ದ ಕಲ್ಲನ್ನು ತೆಗೆದು ಬಾಯಿಗಿಟ್ಟುಕೊಂಡು ತಣ್ಣಗಾದೆವು.
ಬೇಸಿಗೆಯಲ್ಲಿ ಬರುವ ಮಳೆಯಲ್ಲಿ ನೆನೆಯುವ ಸುಖವಿದೆಯಲ್ಲಾ. ಅದರ ಮಜವೇ ಬೇರೆ. ಕಾದ ದೋಸೆಕಲ್ಲಿನ ಮೇಲೆ ನೀರು ಚಿಮುಕಿಸಿದಂತೆ. ಒಳಗೂ ಬಿಸಿ, ಹೊರಗೂ ಬಿಸಿ. ಇವತ್ತು ಹೀಗೆ ಮಳೆಯಲ್ಲಿ ಅರೆಬರೆ ನೆನೆದರೆ, ಮೊನ್ನೆ ಸಾತೊಡ್ಡಿ ಜಲಪಾತದಲ್ಲಿ ಮೈಮನ ತೋಯುವಷ್ಟು ನೀರಾಟವಾಡುವ ಅವಕಾಶ ಸಿಕ್ಕಿತ್ತು.
ಕಳೆದ ಶುಕ್ರವಾರ, ಪತ್ರಿಕೆಯ ಸಹ ಸಂಪಾದಕರ ಮಗಳ ಮದುವೆಗೆಂದು ಯಲ್ಲಾಪುರಕ್ಕೆ ಹೋಗಿದ್ದೆವು. ಮಧ್ಯಾಹ್ನ ಊಟ ಮುಗಿಸಿ ಹುಬ್ಬಳ್ಳಿಗೆ ವಾಪಾಸ್ ಆಗುವಾಗ ಇದಕ್ಕಿದ್ದಂತೆ ಜಲಪಾತದ ಹಾದಿಯ ಬೋರ್ಡು ಕಾಣಿಸಿತು. ಸಂಜೆ ಆಫೀಸಿಗೆ ಹೋಗಲೇಬೇಕಾದ ಅನಿವಾರ್ಯತೆ ಇದ್ದರೂ ಒಂದೆರಡು ತಾಸು ತಡವಾದರೂ ಪರವಾಗಿಲ್ಲ ಎಂದು ನಮ್ಮನ್ನು ನಾವು ಸಮಾಧಾನಿಸಿಕೊಂಡು ಸಾತೊಡ್ಡಿ ಜಲಪಾತದ ಹಾದಿ ಹಿಡಿದೆವು. ಯಲ್ಲಾಪುರದಿಂದ ಈ ಜಲಪಾತ ೨೮ ಕಿ.ಮೀ. ದೂರದಲ್ಲಿತ್ತು. ಕಾರಿನಲ್ಲಿ ಸಹೋದ್ಯೋಗಿಗಳಾದ ಎಂ.ಆರ್. ಮಂಜುನಾಥ್, ವೆಂಕಟೇಶ್, ಮನೋಜ್ ಜೊತೆಗಿದ್ದರು.
ಉತ್ತರ ಕರ್ನಾಟಕ ಉರಿ ಬಿಸಿಲಿನಲ್ಲಿ ಬೇಯುತ್ತಿದ್ದರೂ ಇಲ್ಲಿ ಮಾತ್ರ ಕಣ್ಣು ಹಾಯಿಸಿದಷ್ಟು ದೂರ ಬರಿ ಹಸಿರು. ಕಾಡು. ಕಾಡೊಳಗೊಂದು ಊರು. ಮತ್ತೆ ಕಾಡು. ಮುಗಿಲಿಗೆ ಮುತ್ತಿಡಲು ಜಿದ್ದಿಗೆ ಬಿದ್ದಿಂತಿರುವ ಮರಗಳು. ಎಲ್ಲವನ್ನೂ ಕಣ್ತುಂಬಿಕೊಳ್ಳುತ್ತ ಹೊರಟವರಿಗೆ ರಸ್ತೆಗೆ ಅಡ್ಡಡ್ಡಲಾಗಿ ಬಿದ್ದಿದ್ದ ಮರ ಎದುರಾಯಿತು. ಪುಣ್ಯಕ್ಕೆ ಅದು ರಸ್ತೆಯ ಎರಡು ದಿಬ್ಬಗಳ ಮೇಲೆ ಬಿದ್ದಿದ್ದರಿಂದ ಸಂಚಾರ ಬಂದ್ ಆಗಿರಲಿಲ್ಲ. ಅಲ್ಲೇ ಮೂಲೆಯಲ್ಲಿ ಕಾರು ನಿಲ್ಲಿಸಿ ಮುರಿದ ಮರದ ಬೆನ್ನೇರಿ ವಿಜಯ ದುಂದುಬಿ ಮೊಳಗಿಸಿ ಕೆಳಗೆ ಇಳಿದದ್ದಾಯಿತು. ಪ್ರಯಾಣ ಮುಂದುವರೆಯಿತು.
ಒಮ್ಮೆ ಹಸಿರಾಗಿ, ಇನ್ನೊಮ್ಮೆ ನೀಲಿಯಾಗಿ ಸಾಗರದಂತೆ ಕಂಗೊಳಿಸುತ್ತಿದ್ದ ಕಾಳಿ ನದಿಯ ಹಿನ್ನೀರಿನ ಪಕ್ಕದ ಕಿರಿದಾದ ಕಚ್ಚಾ ರಸ್ತೆಯಲ್ಲಿ ಕಾರು ಚಲಿಸತೊಡಗಿತ್ತು. ಕೊಂಚ ಆಯತಪ್ಪಿದರೂ ಸೀದಾ ಕಾಳಿಯ ಪಾದಕ್ಕೆ ಹೋಗಿಬೀಳುವ ಸಾಧ್ಯತೆಗಳನ್ನು ಬದಿಗೊತ್ತಿ ಕಾರು ಜಲಪಾತದ ಪ್ರವೇಶದ್ವಾರದ ಮುಂದೆ ನಿಂತಿತ್ತು. ಅಲ್ಲಿಂದ ಒಂದೊವರೆ ಕಿ.ಮೀ. ಉದ್ದದ ಕಾಲು ಹಾದಿ ನೇರ ಜಲಪಾತದ ಬುಡಕ್ಕೆ ಕರೆದೊಯ್ಯಿತು. ಬೇಸಿಗೆಯಾದ್ದರಿಂದ ನೀರು ಇರಲಿಕ್ಕಿಲ್ಲ ಎಂಬ ನಮ್ಮ ಊಹೆ ಸುಳ್ಳಾಗಿತ್ತು. ಇಂತಹ ನೀರಿನಲ್ಲಿ ಈಜುವ ಮನಸ್ಸಾಯಿತು. ನಮ್ಮಾಸೆಗೆ ಅಡ್ಡಬಂದ ಕಲ್ಲುಬಂಡೆಗಳನ್ನು ಮೆಟ್ಟಿನಿಂತು ಮುಂದುವರೆದೆವು.
ಜಲಪಾತದ ನೀರು ನೇರ ನೆತ್ತಿಗೆ ಬೀಳುತ್ತಿದ್ದರೆ ತಲೆಯೆಲ್ಲ ಸುತ್ತಿದ ಅನುಭವ. ಕಣ್ಣು ಮುಂಚಿಕೊಂಡು ಹಾಗೆ ಒಂದಿಷ್ಟು ಹೊತ್ತು ಧ್ಯಾನಿಸುತ್ತ ನಿಂತು, ಆಮೇಲೆ ಕಲ್ಲುಬಂಡೆಗಳನ್ನೇರಿ ಜಲಪಾತಕ್ಕೆ ಇನ್ನಷ್ಟು ಹತ್ತಿರವಾಗುವ ಪ್ರಯತ್ನ ನಡೆಸಿದೆವು. ಕಲ್ಲುಗಳು ನಮ್ಮನ್ನು ಬೀಳಿಸಲು ಪೈಪೋಟಿ ನಡೆಸಿದ್ದರೂ ಯಶಸ್ಸು ಕಾಣಲಿಲ್ಲ.
ಅಲ್ಲೇ ಇರುವ ಭಟ್ಟರ ಮಿನಿ ಹೋಟೆಲ್ಲಿನಲ್ಲಿ ಚಾ ಹೀರಿ ಕಾರನ್ನೇರಿದೆವು. ಬರುವ ಹಾದಿಯಲ್ಲಿ ಕಾಡುಕೋಳಿ ಎದುರಿಗೆ ಸಿಕ್ಕಿ ಹೊಟ್ಟೆ ಚುರುಗುಟ್ಟಿತು. ನನ್ನೀ ಬಯಕೆ ಹೇಳಿಕೊಂಡಾಗ, ಪಕ್ಕದಲ್ಲಿದ್ದ ಮಂಜುನಾಥ್, ಹಿಂದೆ ಸ್ವತಃ ಆರ್ ಎಫ್ ಒಬ್ಬರು ಕಾಡಿನಲ್ಲಿ ಜಿಂಕೆ ಮಾಂಸ ತಿಂದ ಕಥೆಯನ್ನೂ, ಮುಂದೆ ಅವರಿಗಾದ ವ್ಯಥೆಯನ್ನೂ ಪರಿಪರಿಯಾಗಿ ಬಿಡಿಸಿಟ್ಟರು. ಹೀಗೆ ಮಾತಿಗೆ ಮಾತು ಬೆರೆಸುತ್ತಾ ಹುಬ್ಬಳ್ಳಿ ಕಚೇರಿಯ ಬಾಗಿಲು ಮುಟ್ಟುವ ಹೊತ್ತಿಗೆ ಸಂಜೆ ಆರಾಗಿತ್ತು.

ಏಪ್ರಿಲ್ 9, 2012 at 7:46 ಅಪರಾಹ್ನ 1 comment

ನಾನು ಮಾದೇವಣ್ಣ ಮೀನಿಗೆ ಗಾಳಹಾಕಿ ಕುಂತದ್ದು

ಹೀಗೊಂದು ದಿನ ಶಿವನಸಮುದ್ರಕ್ಕೆ ಹೋಗಿದ್ದೆ. ಮಳೆಗಾಲದ ಸಮಯ. ಎಂದಿಗಿಂತ ಜೋರಾಗಿ ಹರಿಯೋ ಕಾವೇರಿ. ನದಿಯ ಮೊರೆತದ ಸದ್ದು ದೂರಕ್ಕೂ ಕೇಳಿಸುತ್ತಾ ಇತ್ತು. ಸಖತ್ ನೀರು. ಭರಚುಕ್ಕಿಯನ್ನು ಕಂಡವನೇ ಅದರ ತಳಕ್ಕೆ ಹೊರಟೆ. ಉದ್ದಕ್ಕೂ ಕಲ್ಲುಚಪ್ಪಡಿಯ ಕೊರಕಲು ಹಾದಿ. ಆದರೆ ನನ್ನಂಥವರು ಎಲ್ಲಾದರೂ ನೇರವಾಗಿ ಹೋಗೋದುಂಟಾ! ಅಡ್ಡದಾರಿ ಹಿಡಿದೆ. ಎಡಕ್ಕೆ ತಿರುಗಿದ್ದೇ ಕೆಳಕ್ಕಿಳಿಯತೊಡಗಿದೆ. ಮಳೆಯಿಂದ ತೋಯ್ದ ನೆಲ. ಸ್ವಲ್ಪ ಎಚ್ಚರ ತಪ್ಪಿದರೂ ಸಾಕು ಸುಯ್… ಅಂತ ಜಾರಿಸಿಕೊಂಡು ನೇರ ಜಲಪಾತಕ್ಕೇ ಹೊತ್ತೊಯ್ಯೊ ಅಷ್ಟು ಜಾರುತ್ತಿತ್ತು. ದುರಾದೃಷ್ಟಕ್ಕೆ ಒಬ್ಬನೇ ಬೇರೆ? ಹಿಂಗೆ ಬಿದ್ದರೂ, ಕೊಚ್ಚಿಕೊಂಡು ನೀರೊಳಗೆ ಹೋದರೂ ಎತ್ತುವವರಿಲ್ಲ. ಈ ಹುಡುಗ ಬಂದಿದ್ದ ಅನ್ನುವುದಕ್ಕೆ ಗುರುತೇ ಸಿಗದ ಹಾಗಾದರೆ ಕಷ್ಟ ಅನ್ನುತ್ತ ಎಚ್ಚರದಿಂದ ಹೆಜ್ಜೆ ಇಡುತ್ತಿದ್ದೆ. ಹೀಗೆ ಮುಂದೆ ಹೋಗಿ ನೋಡಿದರೆ ಅಲ್ಲೂ ಒಂದು ಮಿನಿ ಜಲಧಾರೆ. ಆಶ್ಚರ್ಯ ಅನ್ನುವಂತೆ ಅಲ್ಲಿ ಒಬ್ಬ ಮೀನುಗಳಿಗೆ ಗಾಳ ಹಾಕಿ ಕುಂತಿದ್ದಾನೆ. ಅರರೆ.. ಅಂತ ಹತ್ತಿರ ಓದವನೇ ಒಂದಿಷ್ಟು ಹೊತ್ತು ಅವನ ಪಕ್ಕದಲ್ಲೇ ನಿಂತೆ. ಹೆಂಗೆ ಗಾಳ ಹಾಕ್ತಾನೆ ಅಂತ ನೋಡಲಿಕ್ಕೆ! ಆಮೇಲೆ ಅವನನ್ನ ಮಾತನಾಡಿಸಿದೆ. ಸರ್ ಸ್ವಲ್ಪ ಬಿಜಿ ಇದ್ರು. ಮಾತಾಡೋದು ಲೇಟ್ ಆಯ್ತು. ಆಮೇಲೆ ಹಂಗೂ ಹಿಂಗೂ ಪರಿಚಯ ಮಾಡಿಕೊಂಡು ಗಾಳ ಹಾಕುವ ಪಾಠ ಹೇಳಿಸಿಕೊಳ್ಳಲು ಮುಂದಾದೆ.

ಈ ಮೀನು ಹಿಡಿಯುವ ಸಾಹಸ ನಂಗೆ ಹೊಸದೇನಲ್ಲ. ಚಿಕ್ಕವನಿದ್ದಾಗ ಮನೆಯ ಮುಂದೆಯ ಬಚ್ಚಲು ಬಗೆದು, ಎರೆಹುಳು ತೆಗೆದು , ಗಾಳ ಹಿಡಿದು ಹೊಳೆಗೆ ಹೋಗುತ್ತಿದ್ದೆ. ಅಲ್ಲಿ ಗಾಳಕ್ಕೆ ಎರೆಹುಳು ಸಿಕ್ಕಿಸಿ ಹೊಳೆಗೆ ತೇಲಿಬಿಟ್ಟು ಗಂಟೆಗಟ್ಟಲೆ ಫಿಳಿ ಫಿಳಿ ಕಣ್ಣು ಬಿಟ್ಟು ಕುಂತರೂ, ಮುಂಡೇವೂ ಒಂದ್ ಮೀನು ಬೀಳ್ತಿರ್ಲಿಲ್ಲ. ಕಿಲಾಡಿ ಮೀನುಗಳು ಮೀನು ಹಿಡಿಯಲು ಬರದ ನನ್ನ ದಡ್ಡತನವನ್ನೇ ಬಂಡವಾಳ ಮಾಡಿಕೊಂಡು, ಇದ್ದ ಬದ್ದ ಹುಳವನ್ನೆಲ್ಲ ಗಾಳಕ್ಕೆ ಸಿಕ್ಕದ ಹಾಗೆ ಮೇದು ಹೋಗುತ್ತಿದ್ದವು. ಕವರಿನಲ್ಲಿದ್ದ ಹುಳುವೆಲ್ಲ ಖಾಲಿಯಾದ ಮೇಲೆ ನಾನು ಪೆಚ್ಚುಮುಖ ಹಾಕಿಕೊಂಡು ಮನೆಗೆ ಹೋಗೋದು ಖಾಯಂ ದಿನಚರಿ.

ಇಂತಿಪ್ಪ ನನಗೆ ಮೀನು ಹಿಡಿಯುವುದೆಂದರೆ ಇರುವ ಎರಡು ಕಣ್ಣುಗಳು ನಾಲ್ಕಾಗಿ ಅರಳಿ ಬಿಡುತ್ತವೆ. ಇಷ್ಟೆಲ್ಲ ನೆನಪಿಸಿಕೊಳ್ಳೋ ವಾಗಲೇ ಆತನ ಗಾಳಕ್ಕೆ ಮೀನೊಂದು ಬಿತ್ತು. ಅಷ್ಟೇನೂ ದಪ್ಪವಲ್ಲದ ಮೀನು. ಯಾವ ಜಾತಿಯದ್ದೋ. ಅವನು ಅದನ್ನ ಬುಟ್ಟಿಗಿರಿಸುವ ಮುನ್ನ ನಾನು ಒಂದ್ನಿಮಿಷ ಅಂತಂದು ಕ್ಯಾಮರಾವನ್ನ ತಿರುಗಿಸಿ ತಿರುಗಿಸಿ ಎರಡೆರಡು ಸಲ ಕ್ಲಿಕ್ಕಿಸಿದೆ. ಒಂದು ಚೆನ್ನಾಗಿ ಬರದಿದ್ರೆ ಇನ್ನೊಂದಾದ್ರೂ ಬರಲಿ ಅಂತ.

ಆಮೇಲೆ ಮೀನು ಬುಟ್ಟಿ ಸೇರಿತು. ಗಾಳ ನೀರಿಗಿಳಿಯಿತು. ನಮ್ಮ ಮಾತು ಶುರುವಾಯಿತು. ಈತನ ಹೆಸರು ಮಾದೇವ ಅಂತ. ಈ ಮಾದೇವಣ್ಣ ಅಲ್ಲೇ ಹತ್ತಿರದಲ್ಲಿರೋ ಸತ್ತೆಗಾಲ ಎಂಬ ಊರಿನವರು. ಆಗಾಗ್ಗೆ ಇಲ್ಲಿಗೆ ಮೀನು ಹಿಡಿಲಿಕ್ಕೆ ಬರ್ತಾರಂತೆ. ಅದು ಸರಿ ಆದ್ರೆ ಜಲಪಾತದಡಿಗೇ ಬಂದಿದ್ದೀರಲ್ಲಾ ಅಂದ್ರೆ ಮೀನುಗಳು ಎಲ್ಲೆಲ್ಲಿಂದಲೋ ಈಜುತ್ತಾ ಬಂದು ಇಲ್ಲಿ ಮೇಲಿಂದ ಬೀಳ್ತಾವಲ್ಲ ಅದಕ್ಕೆ ಅಂದ್ರು. ಯಾವ ಜಾತಿಯ ಮೀನು ಹಿಡಿತೀರಿ ಅಂದ್ರೆ ಗಾಳಕ್ಕೆ ಸಿಗುವ ಎಲ್ಲ ಜಾತಿಯದೂ ಅಂತ ‘ಜಾತಿ ವಿಜಾತಿಯೆನಬೇಡ….’ ಅನ್ನುವವರ ಹಾಗೇ ಸಣ್ಣದಾಗಿ ನಕ್ಕರು.

ಅಷ್ಟರಲ್ಲೇ ನನ್ನ ಕಣ್ಣು ಪಕ್ಕದಲ್ಲೇ ಹರಿಯುತ್ತಿದ್ದ ರೈಲು ಹುಳುವಿನ ಮೇಲೆ ಬಿತ್ತು. ಹೇಗಾದರೂ ಮಾಡಿ ಇದರದ್ದೊಂದು ಚಂದದ ಚಿತ್ರ ತೆಗೀಬೇಕಲ್ಲ ಅನ್ನೋ ತವಕ. ಅದೋ ನನ್ನನ್ನು ಕಂಡದ್ದೇ ಬೆಚ್ಚಿ ಬೀಳುತ್ತಾ ತನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ ಸುರುಳಿಯಾಗಿ ಸುತ್ತಿಕೊಂಡು, ಮತ್ತೆ ತೆರೆದುಕೊಳ್ಳುತ್ತ ಹರಿಯುತ್ತಿತ್ತು. ಚಿಮ್ಮುವ ಹನಿಗಳಿಂದ ಕ್ಯಾಮರಾ ಲೆನ್ಸ್ ರಕ್ಷಿಸಿಕೊಂಡು ಹೇಗೋ ಬಂದರಲ್ಲಿ ಒಂದೆರಡು ಫೋಟೊ ಕ್ಲಿಕ್ಕಿಸಿದೆ. ಅದರ ಪಾಡಿಗೆ ಅದನ್ನು ಬಿಟ್ಟೆ.

ಇಷ್ಟೊತ್ತಾದರೂ ಇನ್ನೊಂದು ಮೀನು ಗಾಳಕ್ಕೆ ಬೀಳಲಿಲ್ಲ. ಮತ್ತೆ ಮಾತು ಮುಂದುವರಿಯಿತು. ಹೀಗೆ ಒಂದೊಂದು ಬಾರಿ ಮೀನು ಹಿಡಿದಾಗಲೂ ಅವರಿಗೆ ಇನ್ನೂರರಿಂದ ಮುನ್ನೂರು ರುಪಾಯಿ ವ್ಯಾಪಾರ ಆಗುತ್ತಂತೆ. ಸತ್ತೆಗಾಲದಲ್ಲೇ ಮೀನು ಮಾರುತ್ತೀನಿ ಅಂತಂದ್ರು. ಅಷ್ಟರಲ್ಲೇ ಎಲ್ಲಿತ್ತೋ ನತದೃಷ್ಟ ಮೀನು. ಗಾಳಕ್ಕೆ ಬಂದು ಬಿತ್ತು. ಈ ಸಲದ ಮೀನು ಮೊದಲಿನದ್ದಕ್ಕಿಂತ ಸ್ವಲ್ಪ ದಪ್ಪದಿತ್ತು. ಆದ್ರೆ ಅಷ್ಟೇನೂ ದೊಡ್ಡ ಗಾತ್ರದ್ದಾಗಿರಲಿಲ್ಲ. ನನಗೆ ಕೊಂಚ ನಿರಾಸೆಯೇ ಆಯ್ತು. ಇರಲಿ ದೊಡ್ಡ ಮೀನುಗಳನ್ನು ನಾನೇ ಹಿಡಿಯುತ್ತೇನೆ ಅಂದುಕೊಂಡೆ. ಅದನ್ನೂ ಬಿಡದೇ ಕ್ಲಿಕ್ಕಿಸಿದೆ. ಎಂದಿನಂತೆ ಮೀನು ಬುಟ್ಟಿಗೆ ಗಾಳ ನೀರಿಗೆ.

ಅಷ್ಟರಲ್ಲೇ, ನಾನಿಲ್ಲಿಗೆ ಬಂದದ್ದರ ಉದ್ದೇಶ ನೆನಪಾಯಿತು. ಎದ್ದವನೇ ಅಲ್ಲಿಂದ ಹೊರಡಲು ಅನುವಾದೆ. ಹೋಗುವ ಮುನ್ನ ಮಾದೇವಣ್ಣನದ್ದೂ ಒಂದು ಫೋಟೊ ಕ್ಲಿಕ್ಕಿಸಿದೆ. ಸ್ಮೈಲ್ ಪ್ಲೀಸ್ ಅಂದದ್ದೆ, ಅವರೂ ಥೇಟ್ ಹಿರೋ ಥರಾನೇ ಫೋಸ್ ಕೊಟ್ಟರು. ಅವರಿಗೊಂದು ಬೈ ಹೇಳಿ ಅಲ್ಲಿಂದ ಮೇಲಕ್ಕೆ ಹೊರಟೆ.

ಅಕ್ಟೋಬರ್ 22, 2008 at 11:05 ಫೂರ್ವಾಹ್ನ 1 comment


ಕಾಲಮಾನ

ಮೇ 2023
ಸೋಮ ಮಂಗಳ ಬುಧ ಗುರು ‍ಶು ಶನಿ ಭಾನು
1234567
891011121314
15161718192021
22232425262728
293031  

ಮುಗಿಲು ಮುಟ್ಟಿದವರು

  • 9,309 hits

ಪಕ್ಷಿ ನೋಟ

Feeds