Archive for ಫೆಬ್ರವರಿ 8, 2009
ಸತ್ತು ಬದುಕಿದವರು, ಬದುಕಿ ಸತ್ತವರು
‘ವಾಜಪೇಯಿ ತೀರಿಕೊಂಡರಂತೆ’ ಹೀಗೊಂದು ದಿಡೀರ್ ‘ಸುದ್ದಿ’ ಕೇಳಿದ್ದೇ ನಿನ್ನೆ ಒಂದು ಕ್ಷಣ ಆಶ್ಚರ್ಯ ಆಯ್ತು. ರಸ್ತೆಯಲ್ಲಿ ನಡೆಯುತ್ತಿದ್ದವನಿಗೆ ವಾಜಪೇಯಿ ಮುಖವೇ ಕಣ್ಮುಂದೆ ಬಂದಂತಿತ್ತು. ಮನೆಗೆ ಹೋದದ್ದೇ ಟೀವಿ ಹಾಕಿ ನೋಡಿದರೆ, ‘ವಾಜಪೇಯಿ ಚೇತರಿಕೆಗೆ ಹೋಮ, ಹವನ…’ ಅಂತ ಸ್ಲಗ್ ಬರುತ್ತಿತ್ತು. ಮಾಜಿ ಪ್ರಧಾನಿಗಳು ಹುಷಾರಾಗಿದ್ದಾರೆ ಅಂತಂದುಕೊಂಡು ಚಾನಲ್ ಬದಲಿಸಿದೆ.
ಇತ್ತೀಚೆಗೆ ಈ ರೀತಿ ಸುದ್ದಿ ಕೇಳುತ್ತಿರುವುದು ಇದು ಎರಡನೆಯ ಬಾರಿ. ಮಾಜಿ ರಾಷ್ಟ್ರಪತಿ ವೆಂಕಟರಾಮನ್ ವಿಷಯದಲ್ಲೂ ಹೀಗಾಗಿತ್ತು. ಆದರೆ ಇದಕ್ಕಿಂತ ಕೊಂಚ ಭಿನ್ನ. ಜನವರಿ ಇಪ್ಪತ್ತೈದರ ಭಾನುವಾರ ಮನೆಯಲ್ಲೇ ಟೀವಿ ನೋಡ್ತಾ ಇದ್ದೆ. ಅಷ್ಟರಲ್ಲೇ, ಪಕ್ಕದ ಮನೆಯ ಅಂಕಲ್ ಇಂತಹುದ್ದೇ ಒಂದು ಸುದ್ದಿ ಹೇಳಿದ್ರು. ಅದರಂತೆ, “ವೆಂಕಟರಾಮನ್ ತೀರಿಹೋಗಿದ್ದಾರಂತೆ. ಆದ್ರೆ ಅದಿನ್ನೂ ಅಧಿಕೃತವಾಗಿ ಪ್ರಕಟ ಆಗಿಲ್ಲ. ನಾಳೆ ಗಣರಾಜ್ಯೋತ್ಸವ. ಸತ್ತಿರೋರು ಮಾಜಿ ರಾಷ್ಟ್ರಪತಿ ಗಳಾಗಿರೋದ್ರಿಂದ ಯಾವುದೇ ಆಚರಣೆ ಮಾಡುವ ಹಾಗಿಲ್ಲ, ರಾಷ್ಟ್ರಧ್ವಜವನ್ನ ಅರ್ಧಕ್ಕೆ ಇಳಿಸಿ ಹಾರಿಸಬೇಕು. ವಾರಗಳ ಕಾಲ ಶೋಕಚರಣೆ ಮಾಡಬೇಕಾಗಿತ್ತೆ. ಆದ್ರೆ ಏನ್ ಮಾಡೋದು ಗಣರಾಜೋತ್ಸವವನ್ನ ಆಚರಿಸದೇ ಇರೋದು ಸರಿ ಅಲ್ಲ. ಅದಕ್ಕೆ ಈ ವಿಷಯವನ್ನ ಹೀಗೆ ಮುಚ್ಚಿಡಲಾಗುತ್ತೆ. ಗಣರಾಜೋತ್ಸವದ ಬಳಿಕ ಅಧಿಕೃತವಾಗಿ ಪ್ರಕಟಿಸೋದಕ್ಕೆ ಏರ್ಪಾಡು ನಡೆದಿದೆ”
ನ್ಯೂಸ್ ಚಾನಲ್ ಗಳಲ್ಲಿ ನೋಡಿದ್ರೆ ಈ ಬಗ್ಗೆ ಸುಳಿವೂ ಇಲ್ಲ. ಈಗೀಗ ತೀರ ‘ಕುಟುಕು ಕಾರ್ಯಾಚರಣೆ’ ಗಳಿಗೆ ಹೆಸರಾಗ್ತಾ ಇರೋ ಚಾನಲ್ ಗಳಿಗಾದ್ರು ಇದರ ಸುಳಿವು ಸಿಕ್ಕಿ ಹೋಗಿರುತ್ತೆ ಅಂತಂದುಕೊಂಡು ನೋಡಿದರೆ ಅವುಗಳಲ್ಲೂ ಏನೂ ಇಲ್ಲ.
ಅಂಕಲ್ ಗೆ ಯಾರೋ ಏನೋ ಸುಳ್ಳು ಹೇಳಿರಬೇಕು. ಹೀಗೊಂದು ವದಂತಿ ಹಬ್ಬಿರಬೇಕು ಅಂದುಕೊಂಡೆ. ಈ ಬಗ್ಗೆ ಯಾರನ್ನಾದರೂ ಕೇಳಲು ಮುಜುಗರ ಅಂತನಿಸಿ ಸುಮ್ಮನಾದೆ.
ಅದಾದ ಎರಡು ದಿನಗಳ ನಂತರ, ಮತ್ತದೇ ಚಾನಲ್ಲುಗಳಲ್ಲಿ ವೆಂಕಟರಾಮನ್ ನಿಧನ ವಾರ್ತೆ ಪ್ರಸಾರ ಆಗ್ತಾ ಇತ್ತು. ಶ್ರದ್ಧಾಂಜಲಿ ಶುರುವಾಗಿತ್ತು. ಅಧಿಕೃತ ಪ್ರಕಟಣೆಯಂತೆ, ಆರ್. ವೆಂಕಟರಾಮನ್ ಜನವರಿ ೨೭ರ ಮಧ್ಯಾಹ್ನ ೨.೩೦ ವೇಳೆಗೆ ಅನಾರೋಗ್ಯದಿಂದ ನಿಧನ ಹೊಂದಿದ್ದರು.
ಅವತ್ತು ಸಂಜೆ ಒಬ್ಬರೊಡನೆ ಹೀಗೇ ಮಾತನಾಡುತ್ತಿರುವಾಗ, ‘ಸರ್ ಹೀಗೊಂದು ಸುದ್ದಿ ಹಬ್ಬಿತ್ತು ಅದು ನಿಜವಾ’ ಅಂತ ಕೇಳಿದರೆ, ‘ಹೌದು ನಂಗೂ ಈ ಸುದ್ದಿ ಶನಿವಾರನೇ ಕಿವಿಗೆ ಬಿದ್ದಿತ್ತು’ ಅಂದವರ ಮಾತಿಗೆ ಏನು ಹೇಳಬೇಕೋ ತೋಚದೆ ಸುಮ್ಮನಾಗಿದ್ದೆ.
ನಿನ್ನೆ, ಇಲ್ಲಿ ಮೈಸೂರಲ್ಲಿ ವಾಜಪೇಯಿ ಸತ್ತೇ ಹೋದ್ರು ಅಂತ ತಿಳಿದುಕೊಂಡ ಒಂದಿಷ್ಟು ಜನ ಸಭೆ ಸೇರಿ ಶ್ರದ್ಧಾಂಜಲಿ ಕೂಡ ಅರ್ಪಿಸಿದ್ದರಂತೆ! ಹಾಗಂತ ಈಗಷ್ಟೆ ತಿಳಿದುಬಂತು.
ಇಷ್ಟಕ್ಕೂ ಈ ಸುದ್ದಿಗಳೆಲ್ಲ ಹೀಗೆ ಹಬ್ಬೋದು ಹೇಗೆ? ವಯಸ್ಸಾದವರು ಆಸ್ಪತ್ರೆ ಸೇರಿದ್ರು ಅಂದ್ರೆ ಸತ್ತೇ ಹೋದ್ರು ಅಂತ ಅರ್ಥಾನ? ಇನ್ಯಾರೋ ಹೇಳ್ತಿದ್ರು, ಹೀಗೆ ಆಸ್ಪತ್ರೆ ಸೇರಿದ್ದನ್ನೇ ನ್ಯೂಸ್ ಚಾನಲ್ ಗಳು ರೋಚಕವಾಗಿ ಪದೇ ಪದೇ ತೋರಿಸ್ತಾ ಇರೋದ್ರಿಂದ ನಿಜಕ್ಕೂ ಅವರಿಗೆ ಏನೋ ಆಗಿಹೋಗಿದೆ ಅಂತ ಸಾಮಾನ್ಯ ಜನ ಯೋಚನೆ ಮಾಡ್ತಾರೆ ಅಂತ.
ಇವರು ಹೀಗೆಂದರು..